Sunday, April 28, 2024

ಹರಕೆ ಕಟ್ಟುವ ಭಕ್ತರೇ ಟಾರ್ಗೆಟ್ : ಕೆಲಸ ಕೊಡಿಸುವ ನೆಪದಲ್ಲಿ ಲಕ್ಷಾಂತರ ಹಣ ದೋಖಾ

ಬೆಂಗಳೂರು : ಅದೊಂದು ಖರ್ತನಾಕ್ ಗಂಡ-ಹೆಂಡ್ತಿ ಜೋಡಿ. ಮೈ ತುಂಬಾ ರೋಲ್ಡ್ ಗೋಲ್ಡ್ ಜ್ಯುವೆಲ್ಸ್ ಹಾಕ್ಕೊಂಡು, ಟೆಂಪಲ್ ರನ್ ಮಾಡ್ತಿತ್ತು. ದೇವರ ದರ್ಶನಕ್ಕೆಂದು ಹೋಗ್ತಿದ್ದವರು ದೇವಾಲಯಕ್ಕೆ ಬರ್ತಿದ್ದವರಿಗೆ ಸಖತ್ತಾಗಿ ಉಂಡೇನಾಮ ತಿಕ್ತಿದ್ರು. ಚಾಲಾಕಿ ಗಂಡ-ಹೆಂಡತಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಈ ದಂಪತಿ ಹೆಸರು ಪ್ರಕಾಶ್ ಹಾಗೂ ಮಧು. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಗಳಾಗಿರೋ ಈ ಜೋಡಿ ಜೀವನೋಪಾಯಕ್ಕೆ ಮಾತ್ರ ಖರ್ತನಾಕ್ ಐನಾತಿ ಕೆಲಸ ಮಾಡ್ತಿದ್ರು. ಪ್ರತಿದಿನ ಬೆಳಗಾದ್ರೆ ದೇವಾಲಯಗಳಿಗೆ ಭೇಟಿ ಕೊಡ್ತಿದ್ದ ಈ ಜೋಡಿ ದೇವರ ಬಳಿ ಹರಕೆ ಕಟ್ಟೋರನ್ನ ಟಾರ್ಗೆಟ್ ಮಾಡ್ತಿದ್ರು.

ಕಷ್ಟದಲ್ಲಿ ಇರೋರು ಇವರನ್ನ ಸಲೀಸಾಗಿ ನಂಬಬೇಕೆಂದು ಮೈತುಂಬಾ ನಕಲಿ ಚಿನ್ನಾಭರಣ ಧರಿಸಿ ಶ್ರೀಮಂತರಂತೆ ಬಿಲ್ಡಪ್ ಕೊಡ್ತಿದ್ರು. ಅಷ್ಟೇ ಅಲ್ಲದೇ ಕಷ್ಟಸುಖ ವಿಚಾರಿಸುವ ನೆಪದಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ಹತ್ತಿರವಾಗ್ತಿದ್ರು. ನಮಗೆ ಹಲವು ಕಂಪನಿಗಳ ಮಾಲೀಕರು ಪರಿಚಯ. ಒಳ್ಳೆ ಕೆಲಸದ ಜೊತೆ ಒಳ್ಳೆಯ ಸಂಬಳ ಕೂಡ ಸಿಗುತ್ತೆ ಅಂತ ನಂಬಿಸ್ತಿದ್ರು. ಹಾಗೇ RBIನಲ್ಲಿ ಬೇಕಾದ್ರು ಕೆಲಸ ಕೊಡಿಸ್ತೀವಿ ಅಂತ ಪೂರ್ತಿ ನಂಬಿಸ್ತಿದ್ರು.

ಮೂರು ಜನರಿಂದ 34 ಲಕ್ಷ ಹಣ

ಹೀಗೆ ಪರಿಚಯ ಆದ ಮೇಲೆ ನಿಮಗೆ ಕೆಲಸ ಆಗಬೇಕಂದ್ರೆ ಕಂಪನಿಯವರು ಹಣ ಕೇಳ್ತಾರೆ. ನಿಮಗೂ ಒಳ್ಳೆ ಕೆಲಸ ಸಿಗತ್ತೆ. ಕೈ ತುಂಬಾ ಸಂಬಳವನ್ನು ಕೊಡಿಸ್ತೀವೆಂದು ಹಣ ಪಡೀತಿದ್ರು. ಇದೇ ರೀತಿಯಾಗಿ ವಿದ್ಯಾರಣ್ಯಪುರ ಏರಿಯಾ ಸುತ್ತಮುತ್ತಲಿನ ಮೂರು ಜನರಿಂದ 34 ಲಕ್ಷ ಹಣ ಪಡೆದಿದ್ರು. ನಂತರ ಕೆಲಸವನ್ನೂ ಕೊಡಿಸದೇ ಹಣವನ್ನು ವಾಪಸ್ ಕೊಡದೇ ಎಸ್ಕೇಪ್ ಆಗಿದ್ರು. ಹಣ ಪಡೆದವರಿಗೆ ನೀಡಿದ್ದ ಮೊಬೈಲ್ ಸಂಖ್ಯೆ ಆಗಾಗ್ಗೆ ಆನ್ ಅಂಡ್ ಆಫ್ ಆಗ್ತಿತ್ತು. ಈ ಬಗ್ಗೆ ವಂಚನೆಗೊಳಗಾದವ್ರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಸದ್ಯ ವಿದ್ಯಾರಣ್ಯಪುರ ಪೊಲೀಸರು ಮೊಬೈಲ್ ನಂಬರ್ ಟ್ರೇಸ್ ಮಾಡಿ ವಂಚಕ ದಂಪತಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ನಕಲಿ ‍ಚಿನ್ನಾಭರಣ, ಅಸಲಿ ಚಿನ್ನ ವಶ

ಸದ್ಯ ಐನಾತಿ ದಂಪತಿ ಅಮಾಯಕರಿಗೆ ವಂಚಿಸಿ ಪಡೆದಿದ್ದ ಹಣದಲ್ಲಿ ಚಿನ್ನಾಭರಣ ಖರೀದಿ ಮಾಡಿರೋದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ದಂಪತಿಯಿಂದ ಮೊಬೈಲ್ ಫೋನ್ ಡೆಬಿಟ್ ಕಾರ್ಡ್‌ ಕೃತ್ಯಕ್ಕೆ ಬಳಸ್ತಿದ್ದ ನಕಲಿ ‍ಚಿನ್ನಾಭರಣದ ಜೊತೆಗೆ ಕೃತ್ಯದ ನಂತರ ಖರೀದಿಸಿದ್ದ ಅಸಲಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES