Wednesday, May 8, 2024

ಯಡಿಯೂರಪ್ಪ, ವಿಜಯೇಂದ್ರರನ್ನ ನಮ್ಮ ಸಮಾಜ ಒಪ್ಪಲ್ಲ : ಶಾಸಕ ಯತ್ನಾಳ್

ಬೆಳಗಾವಿ : ಹಿಂದೆಯೂ ನಮ್ಮ ಹೋರಾಟಕ್ಕೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ. ವಿಜಯೇಂದ್ರ ವಿರೋಧ ಮಾಡಿದ್ದರು. ಹೀಗಾಗಿ, ಪಂಚಮಸಾಲಿ ಮೀಸಲಾತಿಗೆ ವಿರೋಧಿಸಿದ ವಿಜಯೇಂದ್ರ, ಬಿಎಸ್‌ವೈರನ್ನು ನಮ್ಮ ಸಮಾಜ ಒಪ್ಪಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಪಂಚಮಸಾಲಿ ‌ಸಮಾಜ ಸೇರಿ ಎಲ್ಲ ಸಮಾಜಕ್ಕೆ ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಅದನ್ನು ಜಾರಿ ಮಾಡಬೇಕಷ್ಟೇ. ಡಿಸೆಂಬರ್ 13ರಂದು ನಡೆಯುವ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ನಮ್ಮ ಸಮಾಜದ ಕಾಂಗ್ರೆಸ್ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಹೋರಾಟದ ನೇತೃತ್ವದಿಂದ ದೂರ ಇದ್ದಿದ್ದು ನಿಜ. ಆದರೆ, ಕಾಂಗ್ರೆಸ್ ಶಾಸಕರು ಒಂದು ದಿನವೂ ನಮ್ಮ ಮೀಸಲಾತಿ ವಿಚಾರದಲ್ಲಿ ಮಾತನಾಡಿಲ್ಲ. ಕಾಂಗ್ರೆಸ್​ನ ನಮ್ಮ ಸಮಾಜದ ಶಾಸಕರು, ನಮ್ಮ ಸರ್ಕಾರದ ನಿರ್ಧಾರ ಪ್ರತಿಯನ್ನು ಹರಿದು ಹಾಕಿದ್ರು. 15 ಪ್ರತಿಶತ ಮೀಸಲಾತಿ ಬೇಕು ಎಂದು ನಮ್ಮ ಸರ್ಕಾರದ ನಿರ್ಧಾರದ ಪ್ರತಿ ಹರಿದ್ದಿದ್ದಕ್ಕೆ ಬೇಜಾರ ಆಗಿ ಹೋರಾಟದಿಂದ ದೂರ ಉಳಿದಿದ್ದು ನಿಜ ಎಂದು ಯತ್ನಾಳ್ ಹೇಳಿದರು.

ಮೀಸಲಾತಿಗಾಗಿ ಕೇಂದ್ರಕ್ಕೆ ನಿಯೋಗ

ನಮ್ಮ ಸಮಾಜದ ಸಚಿವರು, ಕಾಂಗ್ರೆಸ್‌ ಶಾಸಕರು ಈ ಬಗ್ಗೆ ಧ್ವನಿ ಎತ್ತುತ್ತಾರೆ ಅಂತ ನಾನು ಸುಮ್ಮನೆ ಇದ್ದೆ. ಸ್ವಾಮೀಜಿಗಳೇ ಖುದ್ದಾಗಿ ನನ್ನ ಭೇಟಿಗೆ ಆಗಮಿಸಿದ್ದಾರೆ, ಅವರಿಗೆ ಗೌರವ ನೀಡಿ ಮತ್ತೆ ಹೋರಾಟಕ್ಕೆ ಇಳಿಯುತ್ತೇನೆ. ಮೀಸಲಾತಿ ಸಿಗುವವರೆಗೂ ಸಕ್ರಿಯವಾಗಿ ಹೋರಾಟದಲ್ಲಿರುತ್ತೇನೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ನೀಡಿರುವ ಮೀಸಲಾತಿ ಜಾರಿಗೆ ತರಲಿ. ಈ ಮೀಸಲಾತಿ ಜಾರಿಯಾದ ಬಳಿಕ ಎಲ್ಲ ಲಿಂಗಾಯತ ‌ಸಮಾಜಕ್ಕೆ ಕೇಂದ್ರದ ಒಬಿಸಿ ಮೀಸಲಾತಿಗೆ ಹೋರಾಡೋಣ. ಈ ಸಂಬಂಧ ಪಕ್ಷಾತೀತವಾಗಿ ಕೇಂದ್ರದ ಬಳಿ ನಿಯೋಗ ಒಯ್ದು ಕೇಂದ್ರದ ಒಬಿಸಿ ಘೋಷಿಸುತ್ತೇವೆ ಎಂದು ಶಾಸಕ ಯತ್ನಾಳ್ ತಿಳಿಸಿದರು.

RELATED ARTICLES

Related Articles

TRENDING ARTICLES