Wednesday, May 8, 2024

ಚಿಕ್ಕ ವಯಸ್ಸಿನವರಲ್ಲಿ ಹೆಚ್ಚು ಹೃದಯಾಘಾತ : ಕಾರಣ ಬಹಿರಂಗಪಡಿಸಿದ ಡಾ. ಮಂಜುನಾಥ್

ಬೆಂಗಳೂರು : ಇತ್ತೀಚೆಗೆ ಯುವಕರಲ್ಲಿ ಹೃದಯಘಾತ ಹೆಚ್ಚಾಗುತ್ತಿದೆ ಎನ್ನುವ ಆತಂಕ ಪದೇ ಪದೇ ಕೇಳುತ್ತಿದ್ದೇವೆ. ಆದರೆ, ಬೆಂಗಳೂರು ಹಾಗೂ ಸುತ್ತಮುತ್ತ ಉಂಟಾಗುತ್ತಿರುವ ವಾಯು ಮಾಲಿನ್ಯದಿಂದಲೂ ಹೃದಯಘಾತ ಆಗುತ್ತಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹತ್ತಿಬೆಲೆಯ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಆಯೋಜನೆ ಮಾಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೃದಯಘಾತ ಎನ್ನುವುದು ಎಲ್ಲೆಡೆ ಕೇಳಿ ಬರುತ್ತಿರುವ ಆಘಾತಕಾರಿ ವಿಚಾರ. ಆದರೆ, ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ.

ಶೇ.35ರಷ್ಟು ಹೃದಯಘಾತಗಳು 45 ವರ್ಷದ ಒಳಗಿನವರಲ್ಲಿಯೇ ಆಗುತ್ತಿದೆ ಎನ್ನುವುದು ಆತಂಕಕಾರಿ ಸಂಗತಿ. ಆದರೆ, ಇದು ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಘಟನೆ ಅಲ್ಲ. 15 ವರ್ಷಗಳ ಹಿಂದಿನಿಂದಲೂ ಕೂಡ ಇಂತಹ ಘಟನೆಗಳು ಆಗಾಗ ಆಗುತ್ತಿವೆ. ಪ್ರತಿಷ್ಠಿತರ ಮನೆಯ ಮಕ್ಕಳು ಹೃದಯಾಘಾತಕ್ಕೆ ಒಳಪಡುತ್ತಿರುವುದರಿಂದ ಇದು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.

10 ಲಕ್ಷದಲ್ಲಿ 4 ಜನರಿಗೆ ಹೃದಯಘಾತ

ಇನ್ನು ಕೋವಿಡ್ ನಂತರ ವ್ಯಾಕ್ಸಿನ್ ತೆಗೆದುಕೊಂಡ 10 ಲಕ್ಷದಲ್ಲಿ 4 ಜನರಿಗೆ ಈ ರೀತಿಯ ಹೃದಯಘಾತ ಆಗಿರಬಹುದು. ಆದರೆ, ಪ್ರತಿದಿನ ಉಂಟಾಗುತ್ತಿರುವ ವಾಯು ಮಾಲಿನ್ಯ ಸ್ವಾಶಕೋಶಕ್ಕೆ ತೊಂದರೆ ನೀಡುತ್ತದೆ. ಜೊತೆಗೆ ಗಾಳಿ ಸೇವಿಸಿದಾಗ ರಕ್ತನಾಳಕ್ಕೆ ಹೋಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗಿದ್ದು ಇದರಿಂದಲೂ ಕೂಡ ಹೃದಯಘಾತ ಹೆಚ್ಚಾಗಿ ಆಗುತ್ತಿದೆ ಎಂದಿದ್ದಾರೆ.

ವರ್ಷಕ್ಕೊಮ್ಮೆ ಮೆಡಿಕಲ್ ಚೆಕಪ್ ಮಾಡಿಸಿ

35 ವರ್ಷ ದಾಟಿದ ಪುರುಷರು ಹಾಗೂ 45 ವರ್ಷ ದಾಟಿದ ಮಹಿಳೆಯರು ವಾರ್ಷಿಕವಾಗಿ ಒಂದು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ. ಅತಿ ಹೆಚ್ಚು ಬೆಂಗಳೂರು ಹಾಗೂ ಸುತ್ತಮುತ್ತ ಉಂಟಾಗುತ್ತಿರುವ ವಾಹನದಟ್ಟಣೆ ತಡೆಯುವಲ್ಲಿ ಸರ್ಕಾರ ಕೂಡ ಗಮನ ಹರಿಸಬೇಕು. ಜೊತೆಗೆ ನಮ್ಮ ಆಹಾರ ಪದ್ಧತಿಗಳು ಹಾಗೂ ಒತ್ತಡದ ಜೀವನದಿಂದ ಹೊರಬರದೆ ಇದ್ದರೆ ಆತಂಕ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಇನ್ನು ಪದವಿ ಪ್ರದಾನ ಸಮಾರಂಭದಲ್ಲಿ ಹೊರ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ವೈದ್ಯರಾದವರು ಕೇವಲ ಹಣ ಸಂಪಾದನೆಯ ಕಡೆ ಗಮನ ಹರಿಸದೆ ರೋಗಿಯ ಆರ್ಥಿಕ ಸ್ಥಿತಿ ಅರಿಯಬೇಕು ಎಂದರು.

RELATED ARTICLES

Related Articles

TRENDING ARTICLES