ಬೆಂಗಳೂರು : ಸಿ.ಎಂ ಇಬ್ರಾಹಿಂ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಿಮಗೆ ಒಪ್ಪಿಗೆನಾ? ಎಂಬ ಪ್ರಶ್ನೆಗೆ ವಸತಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಬರಬಹುದು. ನನ್ನ ಸಂಪರ್ಕದಲ್ಲಿ ಯಾರು ಯಾರು ಇದ್ದಾರೆ ಎಂಬುದನ್ನು ನಾನು ಮಾಧ್ಯಮಗಳ ಮುಂದೆ ಹೇಳಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಹೆಂಗ್ ಪತನಾವಾಗುತ್ತೆ ಅಂತ ಕುಮಾರಸ್ವಾಮಿ ಅವರೇ ಹೇಳಬೇಕು. ನಾವು ಐದು ಉಚಿತ ಗ್ಯಾರಂಟಿಗಳನ್ನು ಕೊಡ್ತಿದ್ದೇವೆ. ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ ಸರ್… ಏನೋ ಒಂದು ನಿರೀಕ್ಷೆ ಇಟ್ಟುಕೊಂಡಿದ್ದರು. ನಮ್ಮನ್ನ ಬಿಟ್ಟು ಸರ್ಕಾರ ರಚನೆ ಮಾಡೋಕೆ ಆಗಲ್ಲ. ಸಮ್ಮಿಶ್ರ ಸರ್ಕಾರ ಬರುತ್ತೆ ಅಂತ ಅಂದುಕೊಂಡಿದ್ದರು. ಅದಕ್ಕೆ ಹೀಗೆ ಮಾತನಾಡುತ್ತಾರೆ ಎಂದು ಹೆಚ್ಡಿಕೆಗೆ ತಿರುಗೇಟು ಕೊಟ್ಟರು.
ನಾವು ಒಂದು ಸ್ಥಾನಕ್ಕೆ ಬಂದಿದ್ವಿ
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಒಂದು ಸ್ಥಾನವೂ ಗೆಲ್ಲಲ್ಲ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ನಾವು ಒಂದು ಸ್ಥಾನಕ್ಕೆ ಬಂದಿದ್ವಿ. ಈಗ ಅದೇ ಪರಿಸ್ಥಿತಿ ಬಿಜೆಪಿ ಬರುತ್ತೆ. ನಾವು ಏನು ಅನುಭವಿಸಿದ್ದೆವೋ ಅದೇ ಪರಿಸ್ಥಿತಿ ಬಿಜೆಪಿ ಬರಲಿದೆ ಎಂದು ಸಚಿವ ಜಮೀರ್ ಅಹಮ್ಮದ್ ಭವಿಷ್ಯ ನುಡಿದ್ದಾರೆ.