Thursday, May 9, 2024

ಶಿವಕುಮಾರ ಸ್ವಾಮೀಜಿ 116ನೇ ಜಯಂತಿ : ಕನ್ನಡದಲ್ಲೇ ಪ್ರಧಾನಿ ಮೋದಿ, ಶಾ ನಮನ

ಬೆಂಗಳೂರು : ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರೀಗಳಿಗೆ ನಮನ ಸಲ್ಲಿಸಿದ್ದಾರೆ.

ಶ್ರೀಗಳ ಜಯಂತಿ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಕನ್ನಡದಲ್ಲಿಯೇ ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ.

ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಹುಟ್ಟು ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಅವರಿಗೆ ನನ್ನ ನಮನ. ಅವರು ಲಕ್ಷಾಂತರ ಜನರ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಸಮಾಜಸೇವೆಗೆ ಉನ್ನತ ಸ್ಥಾನ ಮತ್ತು ಜನರನ್ನು ಸಶಕ್ತಗೊಳಿಸುವುದಕ್ಕೆ ಅವರು ಪ್ರಾಮುಖ್ಯ ನೀಡಿದ್ದರು. ಅವರ ಕನಸುಗಳನ್ನು ಪೂರೈಸಲು ನಾವು ಸದಾ ಶ್ರಮಿಸುತ್ತೇವೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಶಿರಬಾಗಿ ನಮಿಸುತ್ತೇನೆ ಎಂದ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವಿಟ್ ಮಾಡಿದ್ದಾರೆ. ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಅವರ ಜಯಂತಿಯಂದು ಶಿರಬಾಗಿ ನಮಿಸುತ್ತೇನೆ. ನಡೆದಾಡುವ ದೇವರು ಸಮಾಜ ಸೇವೆಗಳ ಮೂಲಕ ಅಪಾರ ಜನರ ಜೀವನ ಪರಿವರ್ತನೆಗೊಳಿಸಿದ್ದಾರೆ. ಹಲವು ಸಂಸ್ಥೆಗಳ ಮೂಲಕ ನಿಸ್ವಾರ್ಥ ಸೇವೆಯ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಅವರ ಕಾರ್ಯ ಮುಂದಿನ ಪೀಳಿಗೆಗಳಿಗೂ ಪ್ರೇರಣೆ ನೀಡಲಿದೆ ಎಂದು ಉಲ್ಲೇಖಿಸಿದ್ದಾರೆ.

ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಪೋಸ್ಟ್ ಮಾಡಿದ್ದಾರೆ. ಶತಮಾನ ಕಂಡ ಶ್ರೇಷ್ಠ ಸಂತ, ತ್ರಿವಿಧ ದಾಸೋಹಿ ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು.

ಕಾಯಕ, ಶಿಕ್ಷಣ ಹಾಗೂ ದಾಸೋಹಕ್ಕೆ ಮಹತ್ವ ನೀಡಿ, ಸಮಾಜವನ್ನು ಪರಿವರ್ತಿಸುವ ಹಾದಿಯಲ್ಲಿ ಶ್ರೀಗಳು ರೂಪಿಸಿರುವ ಪರಂಪರೆ ಶತಶತಮಾನಗಳವರೆಗೆ ಮುಂದುವರೆಯಲಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES