ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯೂ ಆಗಿರುವ ಹೆಚ್.ಡಿ ರೇವಣ್ಣ ಇದೇ ಮೊದಲ ಬಾರಿಗೆ ಮಾಧ್ಯಮದ ಪ್ರತಿಕ್ರಿಯೆ ನೀಡಿದ್ದು ಇದೆಲ್ಲಾ ಇದೆಲ್ಲಾ ಷಡ್ಯಂತ್ರ ಇದಕ್ಕೆಲ್ಲಾ ಹೆದರಿ ಓಡಿ ಹೋಗುವುದಿಲ್ಲ, ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸ ಬಳಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ ಎಂದಿದ್ದಾರೆ. ಇದೆಲ್ಲಾ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ. ಕಾನೂನು ಹೋರಾಟ ಮಾಡ್ತಿನಿ. ನನ್ನ ವಿರುದ್ಧ ನೀಡಿದ ದೂರಿನ ಬಗ್ಗೆ, ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ಎಸ್ಐಟಿಗೆ ವಹಿಸಿದೆಯಲ್ಲಾ, ಎಸ್ಐಟಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಚಾಟನೆ: ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅದೇಶ
ಪ್ರಜ್ವಲ್ ರೇವಣ್ಣ ವಿದೇಶ ಪ್ರಯಾಣ ಮೊದಲೇ ನಿರ್ಧಾರವಾಗಿತ್ತು. ಎಫ್ಐಆರ್ ಹಾಕ್ತಾರೆ ಅನ್ನೋದು ಗೊತ್ತಿರಲಿಲ್ಲ. ತನಿಖೆಗೆ ಕರೆದರೆ ಅವನೂ ಬರ್ತಾನೆ. ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ಹೊಸದಲ್ಲ. ಇಂತಹ ಹಲವು ತನಿಖೆ ನಾವು ಎದುರಿಸಿದ್ದೇವೆ. ದೇವೇಗೌಡರ ಮೇಲೆ ಸಿಒಡಿ ತನಿಖೆ ನಡೆಸಿದ್ದರು, ನಾನು ದೇವೇಗೌಡರ ಬಳಿ ಈ ವಿಷಯ ಮಾತನಾಡಿಲ್ಲ. ಕಾನೂನು ರೀತಿ ಏನಿದೆ ಅದು ನಡೆಯಲಿ ಎಂದು ಹೇಳಿದ್ದಾರೆ.