ಕಲಬುರಗಿ : ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದ ಬಳಿಕವೂ ಹೋರಾಟ ಮಾಡಬೇಕು ಎನ್ನುವ ಮೂಲಕ ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಆಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದರು.
ಅಫಜಲಪುರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಇರಲಿ, ಇಲ್ಲದೆ ಇರಲಿ. ತತ್ವ ಸಿದ್ದಾಂತದ ಸಲುವಾಗಿ ಹೋರಾಟ ಮಾಡಬೇಕು. ಆರ್ಎಸ್ಎಸ್ ತತ್ವ, ಸಿದ್ಧಾಂತ ಸೋಲಿಸುವವರೆಗೂ ನಾವು ಬಿಡೋದಿಲ್ಲ ಎಂದು ತಿಳಿಸಿದರು.
ಎಂ.ವೈ. ಪಾಟೀಲ್ ಹೇಳಿದ್ರು ಕೊನೆ ಎಲೆಕ್ಷನ್ ಅಂತ. ಆದ್ರೆ, ನಾನು ಆ ರೀತಿ ಹೇಳೋದಿಲ್ಲ. ನಾನು ಹುಟ್ಟಿರೋದೆ ರಾಜಕೀಯ ಮಾಡೋದಕ್ಕೆ. ನಾನು ನಿವೃತ್ತಿ ಆಗೋದಿಲ್ಲ. ಸಾಯುವವರೆಗೂ ಹೋರಾಟ ಮಾಡ್ತೇನೆ. ನಾನು ಚುನಾವಣೆಗೆ ನಿಲ್ಲುತ್ತಿಲ್ಲ, ನಿಲ್ಲೋದಿಲ್ಲ. ಆದ್ರೆ, ರಾಜಕೀಯದಿಂದ ದೂರ ಆಗೋದಿಲ್ಲ ಎಂದು ಹೇಳಿದರು.
400 ಅಲ್ಲ, 200 ಪಾರ್ ಕೂಡ ಮಾಡಲ್ಲ
ಮೋದಿಗೆ ಏನಾಗಿದೆಯೋ ನನಗೆ ಗೋತ್ತಿಲ್ಲ. ದೇಶಕ್ಕಾಗಿ ನಾವು ಪ್ರಾಣ ಕೊಟ್ಟಿದ್ದೇವೆ. ಮೋದಿಯವರ ಮನೆಯಲ್ಲಿ ಒಂದು ಇಲಿಯು ಕೂಡ ಸತ್ತಿಲ್ಲ. ಈ ಚುನಾವಣೆಯಲ್ಲಿ ಮೋದಿ ಖಂಡಿತವಾಗಿ ಸೋತೇ ಸೊಲ್ತಾರೆ. ಅವನ ಪಾರ್ಟಿ ಸೋಲುತ್ತೆ. ಅವನು ವಾರಣಾಸಿಯಲ್ಲಿ ಗೆಲ್ಲೋ ಹಾಗೆ ಮಾಡಿಕೊಂಡಿದ್ದಾನೆ. ಅಬ್ ಕಿ ಬಾರ್ 400 ಪಾರ್ ಅಂತ ಹೇಳ್ತಿದ್ದಾನೆ. ಆದ್ರೆ, 200 ಪಾರ್ ಕೂಡ ಮಾಡಲ್ಲ. ಈ ಬಾರಿಯಾದರೂ ನಮ್ಮ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಗೆ ಹೆಚ್ಚು ಬಹುಮತದಿಂದ ಗೆಲ್ಲಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.