ದಾವಣಗೆರೆ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಶಕ್ತಿ ಬರುತ್ತದೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆಯಲ್ಲಿ ನಡೆದ ಪ್ರಜಾಧ್ವನಿ ಜನಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಇಲ್ಲಿ ಗಾಯತ್ರಿ ಸಿದ್ದೇಶ್ವರ್ ಯಾವುದೇ ಕಾರಣಕ್ಕೂ ಗೆಲ್ಲಲ್ಲ ಎಂದು ತಿಳಿಸಿದರು.
ಬಿಜೆಪಿ ಕುಮ್ಮಕ್ಕಿನಿಂದ ಪಕ್ಷೇತರವಾಗಿ ಸ್ಪರ್ಧಿಸಿರುವ ವಿನಯ್ ಕುಮಾರ್ಗೆ ಒಂದೂ ವೋಟು ಹಾಕಬೇಡಿ. ವಿನಯ್ಗೆ ಬೀಳುವ ಮತ ಬಿಜೆಪಿಗೆ ಬಿದ್ದ ಹಾಗೆ. ಬಿಜೆಪಿ ಸಂಸದ ಸಿದ್ದೇಶ್ವರ್ ಅವರು ರಾಜ್ಯದ ಪರವಾಗಿ, ದಾವಣಗೆರೆ ಜಿಲ್ಲೆಯ ಪರವಾಗಿ, ಹೊನ್ನಾಳಿ ಜನರ ಪರವಾಗಿ ಒಂದೇ ಒಂದು ದಿನವೂ ಪಾರ್ಲಿಮೆಂಟಿನಲ್ಲಿ ಬಾಯಿ ಬಿಡಲಿಲ್ಲ. ಹೀಗಾಗಿ, ಬಿಜೆಪಿಗೆ ನೀವು ಹಾಕುವ ಮತಕ್ಕೆ ಬೆಲೆ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಕ್ಕೆ ಆರ್ಥಿಕವಾಗಿ ಬಿಜೆಪಿ ಸರ್ಕಾರ ತೀವ್ರ ಅನ್ಯಾಯ ಮಾಡಿತು. ಬರಗಾಲ ಬಂದಾಗ, ಪ್ರವಾಹ ಬಂದಾಗಲೂ ರಾಜ್ಯಕ್ಕೆ ಅನ್ಯಾಯವಾಯಿತು. ಆಗಲೂ ಸಿದ್ದೇಶ್ವರ್ ಬಾಯಿ ಬಿಡಲಿಲ್ಲ. ಮತ್ತೆ ಇವರು ಪಾರ್ಲಿಮೆಂಟಿಗೆ ಕಳುಹಿಸಿ ಏನು ಪ್ರಯೋಜನ ಆಯ್ತು? ಬರಿ ಟಿಎ, ಡಿಎ ತಗೊಳೋಕೆ, ದೆಹಲಿಯಲ್ಲಿ ಶೋಕಿ ಮಾಡೋಕೆ ಪಾರ್ಲಿಮೆಂಟಿಗೆ ಕಳಿಸಿದ್ದಾ? ಎಂದು ಕಿಡಿಕಾರಿದರು.
ರಮೇಶ್ ಕುಟುಂಬ ಸದಸ್ಯರಿಗೆ ಸಾಂತ್ವನ
ಸಮಾರಂಭಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ಹೊನ್ನಾಳಿಯ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಎಂ. ರಮೇಶ್ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ರಮೇಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.