ಚಿಕ್ಕಬಳ್ಳಾಪುರ : ಪ್ರಧಾನಿ ಮೋದಿ ಅಲೆಯು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬೀಸುತ್ತಿದೆ. ಕಾಂಗ್ರೆಸ್ಗೆ ಆಡಳಿತ ವಿರೋಧಿ ಅಲೆ ಬರುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಚುನಾವಣೆ ಬಹಿರಂಗ ಪ್ರಚಾರದ ಕೊನೆಯ ದಿನ. ನನ್ನ ಪರ ಪ್ರಚಾರ ಮಾಡಿದ ಹಾಗೂ ಸಹಕಾರ ನೀಡಿದ ಎಲ್ಲಾ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
15 ರಿಂದ 20 ದಿನ ಪ್ರಚಾರ ಮಾಡಿದ್ದೇವೆ. 5 ವರ್ಷದಲ್ಲಿ ವಿರೋಧಿ ಅಲೆ ಬರುತ್ತೆ. ಆದ್ರೆ, ಕಾಂಗ್ರೆಸ್ಗೆ ಒಂದು ವರ್ಷದಲ್ಲಿ ವಿರೋಧಿ ಅಲೆ ಬರುತ್ತಿದೆ. ಬಿಜೆಪಿ ಹಾಗೂ ಮೋದಿಯ ಬಗ್ಗೆ ಜನರು ಪ್ರೀತಿ ಹೊಂದಿದ್ದಾರೆ. ಅದರಿಂದ ಮತದಾರರು ಬಿಜೆಪಿಗೆ ಮತ ಕೊಡಬೇಕು ಅಂತ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ
ಕಾಂಗ್ರೆಸ್ ಪಕ್ಷ ಚುನಾವಣೆ ತಂತ್ರ ಮಾಡೋದ್ರಲ್ಲಿ ನಿಸ್ಸೀಮರು. ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅಭಿವೃದ್ಧಿ ಮಾಡಿದ್ದೇವೆ ಅಂತ ಹೇಳೋಕೆ ಏನೂ ಇಲ್ಲ. ಹೀಗಾಗಿ, ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸೋಲುವವರಿಗೆ ಕೊನೆಯ ಅಸ್ತ್ರ ಅಪಪ್ರಚಾರ ಎಂದು ಚಾಟಿ ಬೀಸಿದರು.
ಕಾಂಗ್ರೆಸ್ ಬಂದ್ರೆ ಬರಗಾಲ ಗ್ಯಾರಂಟಿ
8 ವಿಧಾನ ಸಭಾ ಕ್ಷೇತ್ರಗಳಲ್ಲಿ ನಮ್ಮಗಿಂತ ಹೆಚ್ಚಿಗೆ ಮತ ಪಡೆಯೋದಿಲ್ಲ. ನನ್ನ ಮೇಲೆ ಆರೋಪ ಮಾಡೋದಿಕ್ಕೆ ಒಂದೇ ಒಂದು ಸಾಕ್ಷಿ ಇಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವ ಗ್ಯಾರಂಟಿ ಇದ್ದೀಯೋ? ಇಲ್ವಾವೋ? ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ್ರೆ ಬರಗಾಲ ಗ್ಯಾರಂಟಿ, ಭ್ರಷ್ಟಾಚಾರ ಗ್ಯಾರಂಟಿ. ಬಾಂಬ್ ಗ್ಯಾರಂಟಿ, ಹತ್ಯೆ ಗ್ಯಾರಂಟಿ ಮಾತ್ರ ಇರುತ್ತೆ ಎಂದು ವಾಗ್ದಾಳಿ ನಡೆಸಿದರು.
ಅಲ್ಪಸಂಖ್ಯಾತರ ಒಲೈಕೆಯೇ ಕಾಂಗ್ರೆಸ್ ಅಸ್ತ್ರ
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ನೇಹಾ ತಂದೆಯೇ ಹೇಳಿದ್ದಾರೆ ಲವ್ ಜಿಹಾದ್ ಹತ್ಯೆ ಅಂತ. ಅಲ್ಪಸಂಖ್ಯಾತರನ್ನು ಒಲೈಸುವುದೇ ಕಾಂಗ್ರೆಸ್ ನಾಯಕರ ಅಸ್ತ್ರ ಎಂದು ಡಾ.ಕೆ. ಸುಧಾಕರ್ ಟೀಕಿಸಿದರು.