ಕಲಬುರಗಿ : ಈ ಬಾರಿ ನೀವು ಬಿಜೆಪಿಗೆ ಮುಖಭಂಗ ಮಾಡಬೇಕು. ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟರು.
ಅಫಜಲಪುರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ, ಜಿಲ್ಲೆಗೆ ಪ್ರಧಾನಿ ಮೋದಿ ಕೊಟ್ಟ ಕೊಡುಗೆ ಏನೂ ಇಲ್ಲ ಎಂದು ಕುಟುಕಿದರು.
ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಇಡೀ ದೇಶವೇ ಒಂದಾಯಿತು. ಮೋದಿ ಕಲಬುರಗಿಗೆ ಬಂದು ನನ್ನ ವಿರುದ್ಧ ಒಂದು ಟೀಂ ಮಾಡಿದ. ಅಮಿತ್ ಶಾ ಕಲಬುರಗಿಗೆ ಬಂದು ನನ್ನ ವಿರುದ್ಧ ಇನ್ನೊಂದು ಟೀಂ ಮಾಡಿದ ಎಂದು ವಾಗ್ದಾಳಿ ನಡೆಸಿದರು.
ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಿಡಿಕಾರಿದ ಅವರು, ಸೂಳಿ ಬಲೆನಾ ಯಾರವನು? ಆ ಸೂಳಿ ಬಲೆ ಬಂದು ಇದೇ ಅಫಜಲಪುರದಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ ಎಂದು ಎರಡು ಮೂರು ಬಾರಿ ಸೂಳಿ ಬಲೆ ಎಂದೇ ಮಲ್ಲಿಕಾರ್ಜುನ ಖರ್ಗೆ ಉಚ್ಛರಿಸಿದರು.
ಕಲಬುರಗಿ ಜನ ನನ್ನ ‘ಕೈ’ ಬಿಡಲ್ಲ ಅಂದ್ಕೊಂಡಿದ್ದೆ
ನನಗೆ ಟಾರ್ಗೆಟ್ ಮಾಡಿ ಕಳೆದ ಬಾರಿ ಸೋಲಿಸಿದ್ರು. ಅವರೇನೇ ಟಾರ್ಗೆಟ್ ಮಾಡಿದ್ರೂ ಕಲಬುರಗಿ ಜನ ನನ್ನ ಕೈ ಬಿಡಲ್ಲ ಅಂದ್ಕೊಂಡಿದ್ದೆ. ಆದ್ರೆ, ನೀವು ನನಗೆ ಸೋಲಿಸಿದ್ರಿ. ಹೋಗಲಿ ಬಿಡಿ ಅದೇ ಹೇಳೋದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಂಬಾನಿ, ಅದಾನಿಗಾಗಿ ಮೋದಿಗೆ ಅಧಿಕಾರ
ಈ ದೇಶದಲ್ಲಿ ಇಬ್ಬರು ಮಾರುವವರಿದ್ದಾರೆ. ಇಬ್ಬರು ಖರಿದಿದಾರರಿದ್ದಾರೆ. ಮೋದಿ, ಶಾ ಮಾರಾಟ ಮಾಡುವವರಿದ್ದಾರೆ. ಅಂಬಾನಿ, ಅದಾನಿ ಖರೀದಿದಾರರು. ಮೋದಿಗೆ ಜನರ ಹಿತಕ್ಕಾಗಿ ಅಧಿಕಾರ ಬೇಕಿಲ್ಲ. ಅಂಬಾನಿ, ಅದಾನಿಗಾಗಿ ಮೋದಿಗೆ ಅಧಿಕಾರ ಬೇಕಾಗಿದೆ. ನಮ್ಮ ಗ್ಯಾರಂಟಿ ನೋಡಿ ಮೋದಿ ಅದೇ ರೀತಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.