ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ವೈಯಕ್ತಿಕ ಕಾರಣಗಳಿಗೆ ಆಗಿದೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮೃತ ನೇಹಾ ತಂದೆ ನಿರಂಜನ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯನವರ ಹಗುರವಾದ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಎಂದು ಸಿಎಂ ಅವರಿಗೆ ಗೊತ್ತಿರಲಿ. ಈ ಪ್ರಕರಣವನ್ನು ಇಡೀ ರಾಜ್ಯದ ಜನ ನೋಡುತ್ತಿದ್ದಾರೆ. ಸಿಎಂ ಅವರು ಹಗುರವಾದ ಹೇಳಿಕೆಗಳನ್ನು ನೀಡಿದರೆ ನಮ್ಮ ಮನೆತನದ ಗೌರವ ಏನಾಗಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದ ಜನತೆ ಸಿದ್ದರಾಮಯ್ಯ ಅವರ ಮೇಲೆ ಪ್ರೀತಿ, ವಿಶ್ವಾಸವಿಟ್ಟು 135 ಸ್ಥಾನಗಳಲ್ಲಿ ಗೆಲ್ಲಿಸಿದ್ದಾರೆ. ಇಂದು ಕಾಂಗ್ರೆಸ್ ಅಧಿಕಾರದಲ್ಲಿದೆ. ರಾಜ್ಯದ ಸಿಎಂ ಆಗಿರುವ ಅವರು ತಮ್ಮ ಕುಟುಂಬ ಅನುಭವಿಸುತ್ತಿರುವ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ಭಾವುಕರಾಗಿದ್ದಾರೆ.
ಎನ್ಕೌಂಟರ್ ಮಾಡಿ ಸಾಯಿಸಬೇಕು
ನನ್ನ ಮಗಳನ್ನು ಕೊಂದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಅಷ್ಟು ಸಾಲದು, ಅವನನ್ನು ಎನ್ಕೌಂಟರ್ ಮಾಡಿ ಸಾಯಿಸಬೇಕು. ಈ ಕೊಲೆಯ ಹಿಂದೆ ಅವನ ಜೊತೆ ಇನ್ನೂ ನಾಲ್ಕು ಜನ ಇದ್ದಾರೆ. ಅವರನ್ನೂ ಬಂಧಿಸಬೇಕು ಎಂದು ನಿರಂಜನ ಹಿರೇಮಠ ಆಗ್ರಹಿಸಿದ್ದಾರೆ.