ಹಾವೇರಿ : ಹಾವೇರಿ ಜಿಲ್ಲೆಗೆ ಬಸವರಾಜ ಬೊಮ್ಮಾಯಿ ಕೊಡುಗೆ ಏನು? ಉಳಿದ ಸಿಎಂಗಳು ಅವರ ಜಿಲ್ಲೆಗಳಿಗೆ ಅಭಿವೃದ್ಧಿ ಕೆಲಸ ಮಾಡಿದರು ಎಂದು ಮಾಜಿ ಶಾಸಕ ನೆಹರೂ ಓಲೇಕಾರ್ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಜಿಲ್ಲೆಗೆ ಒಂದು ಒಳ್ಳೆ ರಸ್ತೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ಕಾರಣಕ್ಕಾಗಿ ಬೇಸತ್ತು ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಒಳ್ಳೆ ವ್ಯಕ್ತಿ. ಅವರನ್ನು ಬೆಂಬಲಿಸಿದರೆ ಕ್ಷೇತ್ರಗಳಿಗೆ ಒಳ್ಳೆ ಕೆಲಸ ಮಾಡ್ತಾರೆ. ನಾನು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ನಾನು ಬಿಜೆಪಿಯಲ್ಲಿದ್ದಾಗಲೂ ನಾನು ಯಾವುದೇ ವ್ಯಕ್ತಿ ಜೊತೆ ಭಿನ್ನಾಭಿಪ್ರಾಯ ಇಟ್ಟಕೊಂಡಿಲ್ಲ. ನಾನು ಬೇರೆಯವರನ್ನು ಸೋಲಿಸಬೇಕು ಅಂತ ಬಂದಿಲ್ಲ. ಆನಂದ್ ಗಡ್ಡದೇವರಮಠ ಗೆಲ್ಲಿಸಬೇಕು ಅಂತ ಬಂದಿದ್ದೀನಿ ಎಂದು ತಿಳಿಸಿದ್ದಾರೆ.
ಬೊಮ್ಮಾಯಿಯಿಂದ ಒಂದು ಫೋನೂ ಇಲ್ಲ
ಯಡಿಯೂರಪ್ಪನವರೂ ಒಂದು ಮಾತು ನನಗೆ ಬಿಜೆಪಿಯಲ್ಲಿ ಇರಿ ಎಂದು ಹೇಳಲಿಲ್ಲ. ಅವರಿಗೆ ಯಾಕೆ ನನ್ನ ಬಗ್ಗೆ ಉದಾಸೀನತೆ ಬಂತು ಅಂತ ಗೊತ್ತಿಲ್ಲ. ಅದಕ್ಕಾಗಿ ಬೇಸತ್ತು ಹೊರಗೆ ಬಂದಿದ್ದೀನಿ. ಸಂವಿಧಾನದ ವಿರುದ್ಧ ಕಾರ್ಯ ಮಾಡಿದರೆ ಅಂಬೇಡ್ಕರ್ ಸಂವಿಧಾನಕ್ಕೆ ಕಳಂಕ ತಂದಂತೆ. ಬೊಮ್ಮಾಯಿಯಿಂದ ಒಂದು ಫೋನೂ ಇಲ್ಲ, ಮಾತಾಡಲೂ ಇಲ್ಲ. ಕ್ಯಾಂಡಿಡೇಟ್ ಆದವರಿಗೇ ಇಷ್ಟ ಇಲ್ಲ ಅಂದ ಮೇಲೆ ನಾನ್ಯಾಕೆ ಇರಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನನಗೆ ಟಿಕೆಟ್ ತಪ್ಪಿಸಿದ್ದು ಬೊಮ್ಮಾಯಿ
ಖಂಡಿತವಾಗಿ ನನ್ನ ಶಕ್ತಿ ತೋರಿಸ್ತೀನಿ. ನಾನು ಹುದ್ದೆಗಳಿಗೆ ಜೋತು ಬಿದ್ದು ಹೋದವನಲ್ಲ. ಬೊಮ್ಮಾಯಿಯವರಿಗೆ ದೇವರು ಒಳ್ಳೆದು ಮಾಡಲಿ. ಅಖಾಡ ಫ್ರೀ ಆಗಿದೆ, ಅವರು ಬೇಕಾದ ಹಾಗೆ ಕಬಡ್ಡಿ ಆಡಿಕೊಳ್ಳಲಿ. ನಾನು ಪರ್ಯಾಯ ನಾಯಕ ಆಗ್ತೀನಿ. ನನಗಿಂತ ಮೇಲೆ ಹೋಗ್ತಾನೆ ಅಂತ ಬೊಮ್ಮಾಯಿ ಸಹಿಸಲಿಲ್ಲ. ಹೀಗಾಗಿ ನನ್ನ ಬೊಮ್ಮಾಯಿ ತುಳಿದರು. ಬೊಮ್ಮಾಯಿಯವರ ಸ್ವಜನಪಕ್ಷಪಾತ, ದುರಾಡಳಿತದಿಂದ ಕಾಂಗ್ರೆಸ್ ಸೇರಿದ್ದೇನೆ. ನನ್ನನ್ನ ತುಳಿಯಲು ಬೊಮ್ಮಾಯಿ ಪ್ರಯತ್ನ ಮಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿಸಿದ್ದು ಬೊಮ್ಮಾಯಿ ಎಂದು ಕಿಡಿಕಾರಿದ್ದಾರೆ.