ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು, ಹೆಚ್.ಡಿ. ರೇವಣ್ಣ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಪ್ರಕರಣದ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ನಾನು ಸಂಕ್ಷಿಪ್ತವಾಗಿ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಯಾರೋ ಒಬ್ಬರು ಅಶ್ಲೀಲ ಚಿತ್ರ ನನಗೆ ತೋರಿಸಲು ಬಂದಿದ್ದರು. ಈ ಕಣ್ಣಲ್ಲಿ ನೋಡಲ್ಲ, ಕಿವಿಯಲ್ಲಿ ಕೇಳಲ್ಲ ಅಂದಿದ್ದೆ. ಅದನ್ನು ಪಬ್ಲಿಶ್ ಮಾಡುವುದರಿಂದ ನೂರಾರು ಕುಟುಂಬಗಳು ಬೀದಿಗೆ ಬರುತ್ತವೆ. ಸಾಮಾಜಿಕ ಸ್ವಾಸ್ಥ್ಯ ಕೆಡುತ್ತೆ ಅಂತ ಹೇಳಿದ್ದೆ ಎಂದು ಹೇಳಿದ್ದಾರೆ.
ಕೊನೆ ಕಾಲದಲ್ಲಿ ಕೇಡು ಬಂತು
ಜವಾಬ್ದಾರಿ ಇರುವ ಹಿರಿಯರು ಅದನ್ನು ಗಮನಿಸಬೇಕಿತ್ತು. ಒಳ್ಳೆಯ ಮಾತುಗಳನ್ನು ಕೇಳುವುದಿಲ್ಲ. ಕೊನೆ ಕಾಲದಲ್ಲಿ ಕೇಡು ಬಂತು ಅಂತ ಗಾದೆ ಹೇಳ್ತಾರೆ. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದರಲ್ಲಿ ರಾಜಕೀಯ ಬೆರೆಸಬಾರದು
ತಪ್ಪಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರಲ್ಲಿ ರಾಜಕೀಯವನ್ನು ಬೆರೆಸಬಾರದು. ಈ ನೆಲದ ಕಾನೂನು ಏನಿದೆ ಅದರಂತೆ ಎಲ್ಲರೂ ನಡೆದುಕೊಳ್ಳಬೇಕು. ಅದನ್ನು ಆಡಳಿತ ನಡೆಸುವವರು ಎತ್ತಿ ಹಿಡಿಯುತ್ತಾರೆ ಅಂತ ಭಾವಿಸಿದ್ದೇನೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದ್ದಾರೆ.