ರಾಮನಗರ : ಕನಕಪುರಕ್ಕೆ ನೀವು ಬರಬೇಡಿ ಎಂದು ಡಿ.ಕೆ. ಶಿವಕುಮಾರ್ ಕೇಳಿಕೊಂಡಿದ್ದರು ಎಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.
ಕುದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂತಹ ನೀಚ ರಾಜಕಾರಣ ನಾವು ಮಾಡಲ್ಲ. ಅಂತಹ ರಾಜಕೀಯ ನಮಗೆ ಬರಲ್ಲ ಎಂದು ಕುಟುಕಿದ್ದಾರೆ.
ಸುಳ್ಳು ಹೇಳೋದ್ರಲ್ಲಿ ಕುಮಾರಸ್ವಾಮಿಗೆ ಡಾಕ್ಟರೇಟ್ ಕೊಡಬೇಕು. ಡಿ.ಕೆ. ಶಿವಕುಮಾರ್ ಅವರಿಗೆ ಅಂತ ಸ್ಥಿತಿ ಹಿಂದೆನೂ ಬಂದಿಲ್ಲ. ಮುಂದೇನೂ ಬರೋದಿಲ್ಲ. ಗೌರವ ಕೊಡ್ತಾ ಇದೀವಿ ಅಂತ ಬೇರೆ ರೀತಿ ಬಿಂಬಿಸಿಕೊಳ್ಳೋದು ಒಳ್ಳೆಯದಲ್ಲ. ಚರ್ಚೆಗೆ ಸಿದ್ದವಾಗಿದ್ದೇವೆ. ಚುನಾವಣೆ ಆದಮೇಲೆ ಚರ್ಚೆಗೆ ಬರುತ್ತೇವೆ ಎಂದು ಸವಾಲ್ ಹಾಕಿದ್ದಾರೆ.
ನಮ್ಮ ಮೇಲೆ 20 ಕೇಸು ಹಾಕಿದ್ರು
ಕುಮಾರಸ್ವಾಮಿ ಎಲ್ಲಿ ಕಲ್ಲು ಹೊಡೆದಿದ್ದಾರೆ ಎಂಬುದಕ್ಕೆ ದಾಖಲೆ ಕೊಡಲಿ ಎಂಬ ಹೆಚ್ಡಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ದಾಖಲೆ ಕೊಡುತ್ತೇನೆ. ಕನಕಪುರದಲ್ಲಿ ಎಲ್ಲಿ ಕಲ್ಲು ಹೊಡೆದಿದ್ದಾರೆ. ಇಳಕಲ್ನಲ್ಲಿ ಎಲ್ಲಿ ಕಲ್ಲು ಹೊಡೆದ್ರು ಎಲ್ಲವನ್ನೂ ಕೊಡುತ್ತೇನೆ. ನಮ್ಮ ಮೇಲೆ 20 ಕೇಸು ಹಾಕಿದ್ರು. ನೆನಪಿದೆ ಅಲ್ವಾ..? ಬಾಯಿಗೆ ಬಂದಂಗೆ ಮಾತಾಡೋದಲ್ಲ. ಅವರು ಬಂದು ಯಾಕೆ ಕಲ್ಲು ಹೊಡೆದ್ರು ಎಂದು ಹೇಳುತ್ತೇನೆ. ಅವರು ಬೆಳೆ ಬೆಳೆಯೋದಲ್ಲ ಆಲೂಗೆಡ್ಡೆನಾ..? ಎಂದು ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿಯಿಂದ ಅವರಿಗೆ ಭಯ ಬಂದಿದೆ
ಕರ್ನಾಟಕದ ಗ್ಯಾರಂಟಿಯಿಂದ ಅವರಿಗೆ ಭಯ ಬಂದಿದೆ. ಮನೆ ಬಾಗಿಲಿಗೆ ನಮ್ಮ ಗ್ಯಾರಂಟಿ ತಲುಪಿದೆ. ಬಿಜೆಪಿ ಹಾಗೂ ಜೆಡಿಎಸ್ ಅವರು ಬಹಳ ಕೀಳಾಗಿ, ಕೆಟ್ಟ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಈ ರಾಜ್ಯದ ಜನ ಗಮನಿಸುತ್ತಿದ್ದಾರೆ. ‘ಕೈ’ ಯಾವ ಒಳ್ಳೆಯ ಕೆಲಸವನ್ನ ಕೊಟ್ಟಿದೆ ಅವರಿಗೆ ರಾಜ್ಯದ ಜನ ಆಶೀರ್ವಾದ ಮಾಡ್ತಾರೆ ಎಂದು ಡಿ.ಕೆ. ಸುರೇಶ್ ಚಾಟಿ ಬೀಸಿದ್ದಾರೆ.