ಬೆಂಗಳೂರು : ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ I.N.D.I.A ಪರ ಬಲಿಷ್ಠ ಅಲೆ ಇದೆ. ಬಿಜೆಪಿ 150 ಸ್ಥಾನಗಳಿಗೆ ನಿಲ್ಲಲಿದೆ ಎಂದು ಹೇಳಿದ್ದಾರೆ.
ಚುನಾವಣಾ ಬಾಂಡ್ ಜಗತ್ತಿನ ಬಹುದೊಡ್ಡ ಸುಲಿಗೆ ಯೋಜನೆ. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಚಾಂಪಿಯನ್. ಈ ಚುನಾವಣೆಯು ಸೈದ್ಧಾಂತಿಕ ಹೋರಾಟವಾಗಿದೆ. ಇತ್ತೀಚೆಗೆ, ಚುನಾವಣಾ ಬಾಂಡ್ ಕುರಿತಂತೆ ಸಂದರ್ಶನದಲ್ಲಿ ಪ್ರಧಾನಿ ಮೋದಿ ನೀಡಿರುವ ಸ್ಪಷ್ಟನೆಯು ಪೂರ್ವನಿರ್ಧರಿತ ಮತ್ತು ಫ್ಲಾಪ್ ಶೋ ಎಂದು ಕುಟುಕಿದ್ದಾರೆ.
ಬಿಜೆಪಿಗೆ ಸಾವಿರಾರು ಕೋಟಿ ದೇಣಿಗೆ
ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಚುನಾವಣಾ ಬಾಂಡ್ ಯೋಜನೆ ಜಾರಿಗೆ ತರಲಾಗಿತ್ತು ಎಂದು ಮೋದಿ ಹೇಳಿದ್ದಾರೆ. ಅದೇ ನಿಜವಾಗಿದ್ದರೆ, ಸುಪ್ರೀಂ ಕೋರ್ಟ್ ಏಕೆ ಅದನ್ನು ರದ್ದುಪಡಿಸುತ್ತದೆ. ಪಾರದರ್ಶಕತೆ ತರುವುದೇ ನಿಮ್ಮ ಉದ್ದೇಶವಾಗಿದ್ದರೆ, ಬಿಜೆಪಿಗೆ ಸಾವಿರಾರು ಕೋಟಿ ದೇಣಿಗೆ ನೀಡಿದವರ ಹೆಸರುಗಳು ಮತ್ತು ದಿನಾಂಕವನ್ನು ಬಚ್ಚಿಟ್ಟಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನಕ್ಕೆ ಅಂತ್ಯ ಹಾಡಲು ಹೊರಟಿದೆ
ದೇಶದಲ್ಲಿ ಒಂದೆಡೆ ಸಂವಿಧಾನ ಮತ್ತು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಂತ್ಯ ಹಾಡಲು ಹೊರಟಿರುವ ಆರ್ಎಸ್ಎಸ್ ಮತ್ತು ಬಿಜೆಪಿ ಇವೆ. ಮತ್ತೊಂದೆಡೆ, ಸಂವಿಧಾನ ಮತ್ತು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರಕ್ಷಿಸುವ I.N.D.I.A ಒಕ್ಕೂಟವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.