ಶಿವಮೊಗ್ಗ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ಪೆನ್ಡ್ರೈವ್ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಸರ್ಕಾರ ಕಾನೂನು ಅಡಿಯಲ್ಲಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ನೀರಿಕ್ಷೆ ಮೀರಿ ಎಲ್ಲಾ ಕಡೆ ಒಳ್ಳೆಯ ವಾತವರಣ ನಿರ್ಮಾಣ ಆಗಿದೆ. ದೇಶದಲ್ಲಿ 400 ಸ್ಥಾನ ಗೆಲ್ತೇವೆ. 28 ಕ್ಷೇತ್ರದಲ್ಲಿ ಗೆಲ್ಲಲು ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡ್ತಾ ಇದ್ದೀವಿ. ಒಂದೆರಡು ಕ್ಷೇತ್ರದಲ್ಲಿ ವ್ಯತ್ಯಾಸ ಆದರೂ ದೊಡ್ಡ ಮಟ್ಟದಲ್ಲಿ ಗೆಲ್ತೇವೆ. ನಾಳೆಯಿಂದ ಮತ್ತೆ ಪ್ರವಾಸ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ರಾಘವೇಂದ್ರ 2.50 ಲಕ್ಷ ಅಂತರದಲ್ಲಿ ಗೆಲ್ತಾರೆ
ನಾವು 25 ರಿಂದ 26 ಕ್ಷೇತ್ರದಲ್ಲಿ ಗೆಲ್ತೇವೆ. 100ಕ್ಕೆ ನೂರು 25 ರಿಂದ 26 ಕ್ಷೇತ್ರ ಗೆಲ್ತೇವೆ. ಬಿ.ವೈ. ರಾಘವೇಂದ್ರ ಅವರು ಕೂಡ 2.50 ಲಕ್ಷ ಅಂತರದಲ್ಲಿ ಗೆಲ್ತಾರೆ. ರಾಜ್ಯದಲ್ಲಿ ಕೂಡ ಒಳ್ಳೆಯ ರೀತಿಯ ವಾತಾವರಣ ಇದೆ. ಇವತ್ತು ಕೂಡ ಜೆ.ಪಿ. ನಡ್ಡಾ ಅವರು ಶಿವಮೊಗ್ಗಕ್ಕೆ ಬಂದಿದ್ದಾರೆ. ನಮಗೆ ಸ್ಪೂರ್ತಿ ತುಂಬಿದ್ದಾರೆ ಎಂದು ಹೇಳಿದ್ದಾರೆ.
ಇಂಥ ದುರ್ಬಲ ಸರ್ಕಾರ ನಾವು ನೋಡಿಲ್ಲ
ಬರ ಪರಿಹಾರ ವಿಚಾರ ಕುರಿತು ಮಾತನಾಡಿ, ಎಲ್ಲವನ್ನ ಕಾಂಗ್ರೆಸ್ನವರು ಕೇಂದ್ರಕ್ಕೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಬರ ಬಂದಿರುವುದು ನಿಜ. ಅಗತ್ಯ ಇದ್ರೆ ನಾವು ಹೋರಾಟ ಮಾಡ್ತೇವೆ. ಸರ್ಕಾರ ದಿವಾಳಿ ಆಗಿದೆ. ಅಭಿವೃದ್ಧಿಯೇ ನಿಂತು ಹೋಗಿದೆ. ವಿಚಿತ್ರವಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ದುರ್ಬಲ ಸರ್ಕಾರ ನಾವು ನೋಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.