ಬೆಂಗಳೂರು : ದ್ವಾರಕೀಶ್ 500 ರೂಪಾಯಿ ಯಿಂದ 100 ಕೋಟಿ ರೂ. ವರೆಗೂ ಕಂಡಿದ್ದಾನೆ. ಪ್ರತಿಯೊಬ್ಬರಿಗೂ ಅವನು ನಡೆದು ಬಂದ ದಾರಿ ಆದರ್ಶವಾಗಬೇಕು ಎಂದು ಹಿರಿಯ ನಟ ಶ್ರೀನಾಥ್ ಹೇಳಿದರು.
ದ್ವಾರಕೀಶ್ ಪಾರ್ಥಿವ ಶರೀರ ದರ್ಶನ ಪಡೆದ ಬಳಿಕ ಮಾತನಾಡಿ, ಅವನು ಬದುಕಿನಲ್ಲಿ, ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳು ಕಂಡವನು. ನಾನು ಬಿದ್ದಾಗ ಸಾಕಷ್ಟು ಧೈರ್ಯ ತುಂಬಿದ್ದ ಎಂದು ತಿಳಿಸಿದರು.
ಪ್ರತಿಯೊಂದನ್ನೂ ಅನುಭವಿಸಿದ್ದಾನೆ . ಅವನ ಜೊತೆಗೆ ಬೆಳೆದು ಬಂದವರು ನಾವು. ಕಳೆದ ವಾರ ಮಾತನಾಡುವಾಗಲು ಒಂದಷ್ಟು ವಿಷಯ ಹೇಳಿದ್ದ. ಕಲಿಯೋಕೆ ವಯಸ್ಸಿಲ್ಲ ಅನ್ನೋದನ್ನ ತೋರಿಸಿಕೊಟ್ಟ. ನಮ್ಮ ಚಿತ್ರರಂಗ ಯಾವ ಮಟ್ಟದಲ್ಲಿ ಬೆಳೆಯಬೇಕು ಅನ್ನೋದು ಅವನ ಕನಸಾಗಿತ್ತು. ಆ ಕನಸು ನನಸಾಗೋ ಬಗ್ಗೆ ಮಾತನಾಡ್ತಿದ್ದ ಎಂದು ಹೇಳಿದರು.
ಸ್ವಲ್ಪ ಹೊತ್ತು ಮಲಗ್ತೇನೆ ಅಂತ ಹೇಳಿ ಹೋದ
ನಿನ್ನೆವರೆಗೂ ಆರೋಗ್ಯವಾಗಿದ್ದ, ಮನಸ್ಸಲ್ಲಿ ಇರಬಾರದು ಅಂತ ಬಂತೆನೋ. ಸ್ವಲ್ಪ ಹೊತ್ತು ಮಲಗ್ತೇನೆ ಅಂತ ಹೇಳಿ, ವಿದಾಯ ಹೇಳಿ ಹೋದ. ಅವನು ಮಾತನಾಡಿದ್ದು, ಕುಣಿದಿದ್ದು, ಅತ್ತಿದ್ದು, ನಕ್ಕಿದ್ದು ಎಲ್ಲಾ ಫ್ಲ್ಯಾಶ್ ಬ್ಯಾಕ್ ತಗೊಂಡು ಗುಡ್ ಬೈ ಹೇಳಿದ ಎಂದು ತಿಳಿಸಿದರು.
ದ್ವಾರಕೀಶ್ ಜೊತೆಗೆ ಇದ್ರೆ ಧೈರ್ಯ ಬರುತ್ತಿತ್ತು
ದ್ವಾರಕೀಶ್ ಜೊತೆಗೆ ಇದ್ರೆ ಧೈರ್ಯ ಬರುತ್ತಿತ್ತು. ಬದುಕನ್ನು ಧೈರ್ಯವಾಗಿ ನಡೆಸೋದನ್ನ ಹೇಳಿಕೊಟ್ಟ. ಅವನ ಮಾತುಗಳನ್ನು ಈಗಿನ ಹುಡುಗರು ಅಳವಡಿಸಿಕೊಂಡು ಅವನ ಹಾಗೇ ಬೆಳೆಯಲಿ. 3 ವರ್ಷದ ಕೆಳಗೆ ದ್ವಾರಕೀಶ್ ಪತ್ನಿ ಅಂಬುಜಮ್ಮ ಅವರು ಇದೇ ದಿನ ಪ್ರಾಣ ಬಿಟ್ರು ಎಂದು ನಟ ಶ್ರೀನಾಥ್ ಹೇಳಿದರು.