ಶಿವಮೊಗ್ಗ: ಮಟ್ಕಾ ದಂಧೆ ನಡೆಸಲು ಸಹಕರಿಸಬೇಕಾದರೆ ಹಣ ನೀಡಬೇಕು ಎಂದು ಹೇಳಿ ಹಣ ಪಡೆಯುತ್ತಿದ್ದ ವೇಳೆ ಎಎಸ್ಐ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರೆಹಮಾನ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಶಿವಮೊಗ್ಗದ ಆರ್.ಎಂ.ಎಲ್. ನಗರದಲ್ಲಿರುವ ಅವರ ಮನೆಯ ಬಳಿಯೇ ರಫಿಕ್ ಎಂಬುವರಿಂದ 1 ಲಕ್ಷ ರೂ. ಲಂಚ ಪಡೆಯುತ್ತಿರುವ ವೇಳೆ ದಾಖಲೆ ಸಮೇತ ಎಎಸ್ಐ ರೆಹಮಾನ್ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸಾವು
ಲೋಕಾಯುಕ್ತ ಎಸ್.ಪಿ. ವಾಸುದೇವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಟ್ಕಾ ದಂಧೆ ನಡೆಸುವವರಿಂದ 1,20,000 ರೂ. ಹಣಕ್ಕೆ ರೆಹಮಾನ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ, ಇಂದು 1 ಲಕ್ಷ ರೂ. ಹಣ ಲಂಚ ಪಡೆಯುವ ವೇಳೆ ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಾದ ಓಸಿ, ಮಟ್ಕಾ ದಂಧೆಗಳಲ್ಲಿ ಪೊಲೀಸರ ಶಾಮೀಲು ಆರೋಪ ಕೇಳಿ ಬರುತ್ತಿತ್ತು, ಇದೀಗ ಪೊಲೀಸ್ ಅಧಿಕಾರಿಯೇ ವಶಕ್ಕೆ ಸಿಕ್ಕಿಬಿದ್ದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.