ಬೆಂಗಳೂರು : ಈ ಸರ್ಕಾರದವರು ಜೆಸಿಬಿಯಲ್ಲಿ ಹೆಣಗಳನ್ನ ಹಾಕಿ ಮಣ್ಣು ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ್ ಅಂಗಡಿ ಅವರ ದೇಹವನ್ನ ಅವರ ಕ್ಷೇತ್ರದ ಜನತೆಗೆ ಕೊಡಲು ಈ ಸರ್ಕಾರ ಅವಕಾಶ ಮಾಡಿಕೊಡಬೇಕಿತ್ತು. ಆದರೆ ಮಾಡಿಕೊಡಲಿಲ್ಲ ಎಂದು ಕುಟುಕಿದರು.
ರಾಮನಗರ, ಚನ್ನಪಟ್ಟಣ ಕೋವಿಡ್ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಪ್ರತಿ ಮನೆ ಮನೆಗೂ ಹೋಗಿ ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅವತ್ತಿನ ಕಾಲದಲ್ಲಿ ಮೆಡಿಕಲ್ ಕಿಟ್, ತರಕಾರಿ ಕೊಟ್ಟು ಬಂದಿದ್ದೀವಿ. ಕೋವಿಡ್ ಸಂಧರ್ಭದಲ್ಲಿ ಸುರೇಶ್ ಪ್ರತಿ ಹಳ್ಳಿ ಹಳ್ಳಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಅನಿತಾ ವಿರುದ್ಧ 1 ಲಕ್ಷ ಲೀಡ್ನಲ್ಲಿ ಗೆದ್ದಿದ್ದೇವೆ
ನಮ್ಮ ಕಾರ್ಯಕರ್ತರು, ನಮ್ಮ ತಾಯಂದಿರು ಇದ್ದಾರೆ. ನಾವು ಏನು ಮಾತು ಕೊಟ್ಟಿದ್ದೇವೆ ಅದನ್ನ ನಡೆಸಿಕೊಡುತ್ತಿದ್ದೇವೆ. ಎಲ್ಲರ ಮೇಲೂ ನಾವು ಚುನಾವಣೆಗೆ ನಿಂತಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಮೇಲೂ ನಿಂತಿದ್ದೇವೆ. ಡಿ.ಕೆ. ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿಯನ್ನ ಹಾಕಿದ್ರು, ಒಂದು ಲಕ್ಷ ಲೀಡ್ನಲ್ಲಿ ಗೆದ್ದಿದ್ದೇವೆ. ಸತತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
10 ಜನಕ್ಕೂ ಹೆಚ್ಚು ಜನರಿಗೆ ಟಿಕೆಟ್ ಕೈ ತಪ್ಪಿಸಿದ್ದಾರೆ
ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವ ಬಗ್ಗೆ ಮಾತನಾಡಿ, ಅವರ ಪಾರ್ಟಿ ಯಾರನ್ನ ಬೇಕಾದ್ರೂ ಅಭ್ಯರ್ಥಿ ಮಾಡಿಕೊಳ್ಳಲಿ. ಸಿಟ್ಟಿಂಗ್ ಮಿನಿಸ್ಟರ್ ಟಿಕೆಟ್ ತಪ್ಪಿಸಿದ್ದಾರೆ. 10 ಜನಕ್ಕೂ ಹೆಚ್ಚು ಜನರಿಗೆ ಟಿಕೆಟ್ ಕೈ ತಪ್ಪಿಸಿದ್ದಾರೆ. ಅದರಲ್ಲೆ ಗೊತ್ತಾಗತ್ತೆ ಅವರು ಎಷ್ಟು ವೀಕ್ ಇದ್ದಾರೆ ಅಂತ. ನಾವು ರೆಗ್ಯುಲರ್ ಆಗಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸಮಯ ಕೇಳಿದ್ದೇವೆ. ಅವರು ದೇಶ ಸುತ್ತಬೇಕು ನೋಡೋಣ. ಇನ್ನೂ ಟಿಕೆಟ್ ಅನೌನ್ಸ್ ಆಗಿಲ್ಲ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.