ಯಾದಗಿರಿ : ಕುಡಿಯುವ ನೀರಿಗಾಗಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ.
ನಂದಕುಮಾರ ಕಟ್ಟಿಮನಿ ( 21) ಕೊಲೆಯಾದ ಯುವಕ. ಹಣಮಂತ ಹಾಗೂ ಹಣಮವ್ವ ಕೊಲೆ ಮಾಡಿರುವ ಆರೋಪಿಗಳು. ಕುಡಿಯುವ ನೀರಿಗಾಗಿ ತನ್ನ ಅಜ್ಜಿ ಜೊತೆ ಜಗಳ ಮಾಡಿದ್ದ ಆರೋಪಿತರ ಜೊತೆ ಜಗಳ ಮಾಡಿ ಮಸಣ ಸೇರಿದ್ದಾನೆ.
ನೀರಿನ ವಿಚಾರವಾಗಿ ತನ್ನ ಅಜ್ಜಿ ಜೊತೆ ಸಂಬಂಧಿಕರು ಜಗಳವಾಡಿದ್ದಾರೆ. ಈ ವಿಷಯ ಮೃತ ನಂದಕುಮಾರ ಕಟ್ಟಿಮನಿಗೆ ತಿಳಿದಿದೆ. ಈ ವೇಳೆ ತನ್ನ ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಪ್ರಶ್ನೆ ಮಾಡಿದ್ದಾನೆ. ನೀವು ಯಾಕೆ ಜಗಳ ಮಾಡಿದ್ದಿರಿ ಎಂದು ಮೊಮ್ಮಗ ಪ್ರಶ್ನೆ ಮಾಡಿದ್ದಾನೆ. ಇದರಿಂದ ಕುಪಿತರಾದ ಸಂಬಂಧಿಕರೇ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.
ಚಾಕುವಿನಿಂದ ಇರಿದು ಯುವಕನ ಕೊಲೆ
ಹಣಮಂತ ಹಾಗೂ ಹಣಮವ್ವ ಇಬ್ಬರೂ ಸೇರಿ ನಂದಕುಮಾರ ಕಟ್ಟಿಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ವೇಳೆ ನಂದಕುಮಾರ ತಾಯಿಯ ಮೇಲೆಯೂ ಸಂಬಂಧಿಕರು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಹಣಮಂತ ಹಾಗೂ ಹಣಮವ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ನಂದಕುಮಾರ ತಮ್ಮ ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಆರೋಪಿತರನ್ನು ಪ್ರಶ್ನೆ ಮಾಡಿದ್ದ. ಹೀಗಾಗಿ, ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.