ಮಂಡ್ಯ : ಏಪ್ರಿಲ್ 1ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಿನಿಂದ ನಾವು ಪ್ರಚಾರ ಮಾಡ್ತಾ ಇದೀವಿ. ಒಂದು ರೌಂಡ್ ಗ್ಯಾರಂಟಿ ಸಮಾವೇಶದ ಮೂಲಕ ಚುನಾವಣಾ ಪ್ರಚಾರ ಮಾಡಿದ್ದೇವೆ ಎಂದು ಹೇಳಿದ್ದಾರೆ
ಎರಡನೇ ಹಂತದಲ್ಲಿ ಎಲ್ಲಾ ತಾಲೂಕಿನಲ್ಲಿ ಸಭೆ ಮಾಡಿದ್ದೇವೆ. ಯಾವ ಯಾವ ತಾಲೂಕಿನಲ್ಲಿ ಹೇಗೆ ಪ್ರಚಾರ ಮಾಡಬೇಕೆಂದು ಪ್ಲಾನ್ ಮಾಡಿದ್ದೇವೆ. ಮಂತ್ರಿಗಳು, ಶಾಸಕರು, ಸ್ಥಳೀಯ ನಾಯಕರು ಹೇಗೆ ಕೆಲಸ ಮಾಡಬೇಕೆಂದು ಸೂಚನೆ ನೀಡಿದ್ದೇವೆ. ಪ್ರತಿ ತಾಲೂಕುವಾರು ನಾವು ಸಭೆ ಮಾಡ್ತಾ ಇದ್ದೇವೆ. ಮಾರ್ಚ್ 27ಕ್ಕೆ ನಮ್ಮ ತಾಲೂಕುವಾರು ಸಭೆ ಮುಕ್ತಾಯವಾಗುತ್ತದೆ ಎಂದಿದ್ದಾರೆ.
ರಾಹುಲ್ ಗಾಂಧಿ, ಖರ್ಗೆ ಪ್ರಚಾರಕ್ಕೆ ಬರ್ತಾರೆ
ಏಪ್ರಿಲ್ 1ಕ್ಕೆ ನಾವು ನಾಮಪತ್ರ ಸಲ್ಲಿಸುತ್ತೇವೆ. ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬರ್ತಾರೆ. ಕೆ.ಆರ್ ಪೇಟೆ, ಕೆ.ಆರ್ ನಗರದಲ್ಲಿ ಚುನಾವಣಾ ಪ್ರಚಾರ ಸಮಾವೇಶ ಮಾಡ್ತೀವಿ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು.