ಬೆಂಗಳೂರು : ಯೋ ಬರ್ಕೊಳಯ್ಯ, ಶಿವಮೊಗ್ಗ ನಂದು ಎಂದು ನಟ ಶಿವರಾಜ್ಕುಮಾರ್ ಡೈಲಾಗ್ ಹೊಡೆದಿದ್ದಾರೆ.
ಶಿವಮೊಗ್ಗದ ಸಂತೆಕಡೂರಿನಲ್ಲಿ ಪತ್ನಿ ಹಾಗೂ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಶಿವಣ್ಣ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮೊದಲ ಸಲ ನಿಮ್ಮ ಊರಿಗೆ ಬಂದಿದ್ದೇನೆ. ನಾನು ಮನಸ್ಸಿನಿಂದ ಮಾತನಾಡುತ್ತೇನೆ ಎಂದರು.
ಗೀತಾ ನಮ್ಮ ಮನೆಗೆ ಬರುವುದಕ್ಕಿಂತ ಮೊದಲು, ನಿಮ್ಮ ಮನೆ ಮಗಳು. 38 ವರ್ಷ ಅವಳೊಂದಿಗೆ ಸಂಸಾರ ಮಾಡಿದ್ದೇನೆ. ನನಗಿಂತ ನಿಮಗೆ ಚೆನ್ನಾಗಿ ಗೊತ್ತು, ಗೀತಾ ನಿಮ್ಮ ಮನೆ ಮಗಳು. ಮಹಿಳೆಗೆ ಶಕ್ತಿ ಇದೆ, ಈ ಬಾರಿ ಗೀತಾಗೆ ಅವಕಾಶವನ್ನು ನೀಡಿ. ಒಂದು ಅವಕಾಶ ಕೊಟ್ಟು ನೋಡಿ ಏನು ಮಾಡ್ತಾರೆ. ಏನು ಮಾಡ್ತೇವೆ ಎಂದು ಹೇಳೋದನ್ನ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ತವರು ಮನೆಯಿಂದ ಉಡುಗೊರೆ ಕೊಡಿ
ಅನುಭವ ಮುಖ್ಯ ಅಲ್ಲ. ನನ್ನ ರಕ್ತದಲ್ಲಿ ರಾಜಕೀಯ ಇಲ್ಲ. ಗೀತಾ ರಕ್ತದಲ್ಲಿ ರಾಜಕೀಯ ಇದೆ. ಸುಳ್ಳು ಹೇಳಿ ರಾಜಕಾರಣ ಮಾಡೋದಲ್ಲ. ಹೆಣ್ಣುಮಕ್ಕಳು ತವರು ಮನೆಗೆ ಬಂದಾಗ ಉಡುಗೊರೆ ಕೊಡುತ್ತಾರೆ. ಗೀತಾ ಅವರನ್ನು ಎಂಪಿಯಾಗಿ ಗೆಲ್ಲಿಸಿ ತವರು ಮನೆಯಿಂದ ಉಡುಗೊರೆ ಕೊಡಿ. ಒಂದು ಸಲ ಗೆಲ್ಲಿಸಿ 24 ಗಂಟೆ ಹಾಡ್ತೇನೆ ಬೇಕಾದರೆ ಎಂದು ಶಿವರಾಜ್ಕುಮಾರ್ ತಿಳಿಸಿದರು.