ಶಿವಮೊಗ್ಗ : ನನ್ನ ರಕ್ತದ ಕಣ ಕಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗಿಂತ ನಿಷ್ಠಾವಂತರು ಬಿಜೆಪಿಯಲ್ಲಿ ಯಾರಿದ್ದಾರೆ? ಯಡಿಯೂರಪ್ಪ ಅವರ ಕುಟುಂಬದ ವಿರುದ್ಧವೇ ನನ್ನ ಸ್ಪರ್ಧೆ ಎಂದು ಮತ್ತೆ BSY ಕುಟುಂಬದ ವಿರುದ್ಧ ಗುಡುಗಿದರು.
ನನ್ನಲ್ಲಿ ಬಿಜೆಪಿಯ ಹಿಂದುತ್ವ ತುಂಬಿದೆ. ನನ್ನ ರಕ್ತದ ಕಣ ಕಣದಲ್ಲೂ ಮೋದಿಜಿ ಇದ್ದಾರೆ. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ರು. ನನ್ನ ಉಸಿರುವವರೆಗೂ ಬಿಜೆಪಿ ಬಿಡಲ್ಲ ಎಂದಿದ್ದೆ. ಕುತ್ತಿಗೆ ಕೊಯ್ದರು ಬಿಜೆಪಿ ಬಿಡಲ್ಲ ಎಂದಿದ್ದೆ. ಬಿಜೆಪಿ ನನ್ನ ತಾಯಿ. ನನ್ನ ತಾಯಿಯಿಂದ ಬೇರ್ಪಡಿಸಲು ಯಾರಿಂದಲೂ ಆಗಲ್ಲ ಎಂದು ತಿಳಿಸಿದರು.
ಮುಸಲ್ಮಾನರು ನನಗೆ ಬೆಂಬಲ ನೀಡ್ತಾರೆ
ನನ್ನ ಹೋರಾಟ ಬಿಜೆಪಿ ವಿರುದ್ಧ ಅಲ್ಲ. ಕುಟುಂಬ ರಾಜಕಾರಣ ವಿರುದ್ಧ ನನ್ನ ಸ್ಪರ್ಧೆ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದಲ್ಲಿ ಇಲ್ಲದವರು ನನ್ನನ್ನು ಬೆಂಬಲ ನೀಡುತ್ತಿದ್ದಾರೆ. ನನಗೆ ಕ್ಷೇತ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ರಾಷ್ಟ್ರವಾದಿ ಮುಸಲ್ಮಾನರು ನನಗೆ ಬೆಂಬಲ ನೀಡುತ್ತಾರೆ. ನಾನು ಬಿಜೆಪಿ ಬಿಟ್ಟಿಲ್ಲ, ಇನ್ನು ಬಿಜೆಪಿಯಲ್ಲೇ ಇದ್ದೇನೆ ಎಂದು ಹೇಳಿದರು.
ರಾಘವೇಂದ್ರ ಸೋತು ಮನೆಗೆ ಹೋಗ್ತಾರೆ
ಜಗದೀಶ್ ಶೆಟ್ಟರ್ ಅವರನ್ನು ಕರೆದುಕೊಂಡು ಬಂದು ಟಿಕೆಟ್ ಕೊಡುತ್ತಾರೆ. ಯಡಿಯೂರಪ್ಪ ಕೇಂದ್ರದ ವರಿಷ್ಠರ ಮೇಲೆ ತಮ್ಮ ಪ್ರಭಾವ ಬಳಸಿ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಅದರ ಪರಿಣಾಮ ಏನು ಎನ್ನುವುದು ಲೋಕಸಭಾ ಚುನಾವಣೆ ನಂತರ ಗೊತ್ತಾಗಲಿದೆ. ಚುನಾವಣೆ ನಂತರ ಬಿ.ವೈ. ವಿಜಯೇಂದ್ರ ರಾಜೀನಾಮೆ ನೀಡುತ್ತಾರೆ. ಬಿ.ವೈ. ರಾಘವೇಂದ್ರ ಸೋತು ಮನೆಗೆ ಹೋಗುತ್ತಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.