ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಪೇದೆಯಿಂದ ಪಿಸ್ತೂಲ್ ಮಿಸ್ ಫೈಯರಿಂಗ್ ಆಗಿ ಠಾಣೆಯ ಮತ್ತೊಬ್ಬ ಪೇದೆ ರೈಟರ್ ಕಾಲಿಗೆ ಗುಂಡೇಟು ಬಿದ್ದಿರುವ ಘಟನೆ ನಗರದ ಬೇಗೂರು ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆದಿದೆ.
ಬೇಗೂರು ಠಾಣೆಯ ಎಸ್.ಬಿ ಕಾನ್ಸ್ಟೇಬಲ್ ವೆಂಕಣ್ಣರಿಂದ ಪಿಸ್ತೂಲ್ ಮಿಸ್ ಫೈಯರ್ ಆಗಿದ್ದು, ರೈಟರ್ ಅಂಬುದಾಸ್ ಎಂಬುವವರ ಎಡಗಾಲಿಗೆ ಗುಂಡು ತಗುಲಿ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಅಂಬುದಾಸ್ ಎನ್ನುವವರನ್ನು ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡ ಬಂಧನ: ಡಿಸಿಪಿ ಗಿರೀಶ್ ಪ್ರತಿಕ್ರಿಯೆ!
ಲೋಕಸಭಾ ಚುನಾವಣೆ ಹಿನ್ನೆಲೆ ಬೇಗೂರು ಪೊಲೀಸ್ ಠಾಣೆಯಲ್ಲಿದ್ದ ಪಿಸ್ತೂಲ್ ಗಳನ್ನು ಮುಕುಂಡರೆಡ್ಡಿ ಎನ್ನುವವರು ಪಿಸ್ತೂಲಿನ ಬುಲೆಟ್ ಮ್ಯಾಗಜೀನ್ ಕಳಚಿ ಜಮೆ ಮಾಡಿಟ್ಟಿದ್ದರು, ಬಳಿಕ ಪಿಸ್ತೂಲಿನಲ್ಲಿ ಬುಲೆಟ್ ಲಾಕ್ ಆಗಿರುವ ಶಂಕೆಯಿಂದ ಪರಿಶೀಲನೆ ವೇಳೆ ಟ್ರಿಗರ್ ಒತ್ತಿದಾಗ ಮಿಸ್ ಫೈಯರ್ ಆಗಿದೆ.
ಘಟನೆ ಹಿನ್ನೆಲೆ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.