ಬೆಂಗಳೂರು : ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿ ಇಲ್ಲ. ಇದೆಲ್ಲವೂ ಊಹಾಪೋಹಗಳ ಸುದ್ದಿ. ಪ್ರಜ್ವಲ್ ರೇವಣ್ಣ ಪ್ರಕರಣದ ವಿಚಾರವಾಗಿ ಅವರು ಬೇಜಾರಾಗಿದ್ದಾರೆ ಎಂದು ಹೇಳಿದ್ದಾರೆ.
ಮೇ 7ರಂದು ಬಳಿಕ ದಾಖಲೆ ಬಿಡುಗಡೆ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಟೈಮ್ ಯಾಕೆ ವೆಸ್ಟ್ ಮಾಡ್ತಿರಾ..? 7ನೇ ತಾರೀಖಿನವರೆಗೆ ಕಾಯುವುದು ಬೇಡ. ಅದೇನು ಇದೆ ಅಂತ ಈಗಲೇ ಹೇಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಇನ್ನು ಇದಕ್ಕೆ ಕಾರಣ ಯಾರು? ಹಿಂದೆ ಯಾರಿದ್ದಾರೆ? ಮುಂದೆ ಯಾರಿದ್ದಾರೆ? ಎಲ್ಲವೂ ಕೂಡ ಗೊತ್ತಾಗುತ್ತೆ. ಇದೊಂದು ಕುಟುಂಬ ಕಲಹ ಅಂತ ಗೊತ್ತಾಗಿದೆ. ತಪ್ಪು ಮಾಡಿದ್ದೇವೆ ಕ್ಷಮಿಸಿ ಅಂದ್ರಿ, ಉಪ್ಪು ತಿಂದವರು ನೀರುಕುಡಿಲಿ ಅಂದ್ರಿ. ರೇವಣ್ಣ ಮತ್ತು ನಮ್ಮ ಕುಟುಂಬ ಬೇರೆ ಅಂದ್ರಿ. ಈಗ್ಯಾಕೆ ನಿಮ್ಮ ಸ್ಟ್ಯಾಂಡ್ ಬದಲಾಯಿಸುತ್ತಿದ್ದೀರಾ? ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.