ಧಾರವಾಡ : ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೋ ಬ್ಯಾಕ್ ಘೋಷಣೆ ಜೋರಾಗುತ್ತಿರುವ ವಿಚಾರ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರದ್ದೇ ಹೆಸರು ಬಹುತೇಕ ಅಂತಿಮವಾಗುವ ಸಾಧ್ಯತೆ ಇದೆ. ಅವರಿಗೇ ಟಿಕೆಟ್ ಸಿಗುತ್ತದೆ. ಎಲ್ಲಾ ಸೆಟಲ್ ಆಗಲಿದೆ ಎಂದು ಹೇಳಿದರು.
ಕಮಲ ಪಾಳಯದಲ್ಲಿ ಟಿಕೆಟ್ ವಾರ್ ವಿಚಾರವಾಗಿ ಮಾತನಾಡಿ, ಕರಡಿ ಸಂಗಣ್ಣ ಜೊತೆ ನಾನು ಮಾತಾಡಿದ್ದೇನೆ. ನಾನು ಪಾರ್ಟಿ ಬಿಡೋದಿಲ್ಲ ಅಂತ ಹೇಳಿದ್ದಾರೆ. ಅವರು ರೆಬೆಲ್ ಆಗಿ ಕಣಕ್ಕೆ ಇಳಿಯೋದಿಲ್ಲ ಅಂದಿದ್ದಾರೆ. ಕೇವಲ ಬೆಂಬಲಿಗರ ಸಭೆ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಮಾಧುಸ್ವಾಮಿ ಜೊತೆ BSY ಮಾತಾಡ್ತಾರೆ
ಇನ್ನು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಜೊತೆ ಬಿ.ಎಸ್. ಯಡಿಯೂರಪ್ಪ ಮಾತನಾಡ್ತಾರೆ. ಕೆ.ಎಸ್. ಈಶ್ವರಪ್ಪ ಜೊತೆ ಹಿರಿಯರು ಮಾತನಾಡ್ತಾರೆ. ಉಳಿದವರೊಂದಿಗೆ ಮುಖಂಡರು ಮಾತನಾಡ್ತಾರೆ. ಅಂತಿಮವಾಗಿ ಪರಿಹಾರ ಸಿಗಲಿದೆ ಎಂದು ಹೇಳಿದರು.
ಅವ್ರು ನಮ್ಮ ಸೆಂಟ್ರಲ್ ಪೊಲೀಸ್ ಅಲ್ಲ
ಮಹದಾಯಿ ಹೋರಾಟಗಾರನಿಗೆ ರೇಲ್ವೆ ಪೊಲೀಸರು ಬಂಧಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ರಾಜ್ಯ ರೇಲ್ವೆ ಪೊಲೀಸರು. ನಮ್ಮ ಸೆಂಟ್ರಲ್ ಪೊಲೀಸ್ ಅಲ್ಲ. ಕೇಸ್ ಆಗಿರಬೇಕು, ಇವರು ಹಾಜರಾಗಿರಲಿಕ್ಕಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ, ನೀವು ಹೇಳಿದ ಮೇಲೆ ಗೊತ್ತು. ಕೇಸ್ ತೆಗೆಯಲು ಏನು ಪ್ರಯತ್ನ ಮಾಡಬೇಕೋ ಮಾಡ್ತೇನೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.