ರಾಯಚೂರು : ವಿಪರೀತ ಬಿಸಿಲಿಗೆ ರೈತನೋರ್ವ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.
ಜಾಲಿಬೇಂಚಿ ಗ್ರಾಮದ ರೈತ ಹನುಮಂತು ಮೃತ ದುರ್ದೈವಿ. ಮೃತ ರೈತ ಎಂದಿನಂತೆ ಜಮೀನಿನ ಕೆಲಸಕ್ಕೆ ತೆರಳಿದ್ದರು. ಬಣೆವೆ ಕೆಲಸ ಮುಗಿಸಿಕೊಂಡು ಮನೆಗೆ ಆಗಮಿಸಿದ್ದರು. ಕೆಲಸದಿಂದ ಬರುತ್ತಿದ್ದಂತೆ ನೀರು ಕುಡಿದಾಗ ದಿಢೀರನೆ ಕುಸಿದು ಬಿದ್ದಿದ್ದಾರೆ.
ಮನೆಯವರು ಏನಾಯಿತು ಎಂದು ನೋಡುವಷ್ಟರಲ್ಲೇ ರೈತ ಹನುಮಂತು ಪ್ರಾಣಪಕ್ಷಿ ಹಾರಿ ಹೋಗಿತ್ತು. ಕುಸಿದು ಬಿದ್ದ ಕೂಡಲೇ ಅವರು ಮೃತಪಟ್ಟಿದ್ದಾರೆ. ಮನೆಗೆ ಆಧಾರವಾಗಿದ್ದ ಹನುಮಂತು ಆಕಸ್ಮಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಜ್ಯಾದ್ಯಂದ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗ್ತಿದ್ದು, ರಾಯಚೂರಿನಲ್ಲಿ ಕಳೆದ ಮೂರು ದಿನಗಳಿಂದ 44 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪ ದಾಖಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿಂದು 46.1 ದಾಖಲೆಯ ಪ್ರಮಾಣದ ತಾಪಮಾನ ದಾಖಲಾಗಿದೆ. ಇನ್ನು ಕಾಳಗಿ ತಾಲೂಕಿನಲ್ಲಿ 46.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಮಾನ ಇಲಾಖೆಯಿಂದ ಮಧ್ಯಾಹ್ನ ಉಷ್ಣಾಂಶ ವರದಿಯನ್ನ ಬಿಡುಗಡೆ ಮಾಡಲಾಗಿದೆ.