ಬೆಳಗಾವಿ : ಲೋಕಸಭಾ ಚುನಾವಣೆ ನಂತರ ಪ್ರಜ್ವಲ್ ಪ್ರಕರಣವು ಕಣ್ಮರೆ ಆಗಬಹುದು. ಎಸ್ಐಟಿ ತನಿಖೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಸತ್ಯ ಗೊತ್ತಾಗಲಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ವ್ಯವಸ್ಥೆ ರಾಜಕೀಯಕರಣ ಆಗುವ ಸಾಧ್ಯತೆಯಿದೆ. ಹಾಗಾಗಿ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ತಿಳಿಸಿದ್ದಾರೆ.
ಏಪ್ರಿಲ್ 24ನೇ ತಾರೀಖು ಪೈನ್ಡ್ರೈವ್ ವಿಚಾರ ಗೊತ್ತಾಗಿದೆ. ಏ.26ನೇ ತಾರೀಖು ಪೈನ್ಡ್ರೈವ್ ಹೊರಗೆ ಬಂತು. ಸರ್ಕಾರ ಆಗಲೇ ಕೇಸ್ ದಾಖಲಿಸಬಹುದಿತ್ತು. ಪ್ರಜ್ವಲ್ ವಿದೇಶಕ್ಕೆ ಹೋಗುವುದನ್ನ ತಡೆಯಬಹುದಿತ್ತು. ಅಧಿಕಾರ ಇದ್ದಾಗ ಭ್ರಷ್ಟಾಚಾರ, ಅಧಿಕಾರ ಇಲ್ಲದಾಗ ಸುಳ್ಳು. ಇವು ಕಾಂಗ್ರೆಸ್ ಪಕ್ಷದ ಒಂದೇ ನಾಯ್ಯದ ಎರಡು ಮುಖಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಒಂದೊಂದು ಟ್ರಿಫ್ ಒಬ್ಬರೊಂದಿಗೆ ಹೋಗ್ತಾರೆ ಅಂತೆ. ಇದನ್ನು ನಾವು ನಂಬಬೇಕಾ? ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರೇ ಹೇಳಿದ್ದಾರೆ, ಉಪ್ಪು ತಿಂದವರು ನೀರು ಕುಡಿಯಬೇಕು ಅಂತ. ಕರ್ನಾಟಕದಲ್ಲಿ ಕೆಲವು ಜನ ಕ್ರಿಮಿನಲ್ ಹಿನ್ನೆಲೆ ಇದ್ದವರು ಇದ್ದಾರೆ ಎಂದು ಕುಟುಕಿದ್ದಾರೆ.
ಲಕ್ಷ್ಮಣ ಸವದಿ ಬೈ ಬರ್ತ್ ದೇಶ ಭಕ್ತರು
ಇದೇ ವೇಳೆ ಶಾಸಕ ಲಕ್ಷ್ಮಣ ಸವದಿಗೆ ಟಾಂಗ್ ಕೊಟ್ಟ ಸಿ.ಟಿ. ರವಿ, ಲಕ್ಷ್ಮಣ ಸವದಿ ಬೈ ಬರ್ತ್ ದೇಶ ಭಕ್ತರು. ಲಕ್ಷ್ಮಣ ಸವದಿ ತಮ್ಮ ಪಾರ್ಟಿಗೆ ದೇಶಭಕ್ತಿ ಹೇಳಿಕೊಡಲಿ. ಭಾರತ ಮಾತಾಕೀ ಜೈ ಎನ್ನಬೇಕಾದ್ರೆ ಸವದಿ ಖರ್ಗೆಯವರಿಂದ ಅನುಮತಿ ಪಡೆಯುತ್ತಿರಲಿಲ್ಲ. ಲಕ್ಷ್ಮಣ ಸವದಿ ಜನ್ಮತಃ ದೇಶಭಕ್ತರು. ಲಕ್ಷ್ಮಣ ಸವದಿ ಸೋತರು ಅವರನ್ನ ನಾವು ಡಿಸಿಎಂ ಮಾಡಿಲ್ವಾ? ಕಾಂಗ್ರೆಸ್ನವರು ಅವರ ಮುಖಕ್ಕೆ, ಮೊಣಕೈಗೆ ತುಪ್ಪ ಸವರಿದ್ರು. ಏನಾದರೂ ಆಗ್ತಾರೆ ಎಂದು ಹಾಗೆ ಮಾಡ್ತಿದ್ದಾರೆ. ಲಕ್ಷ್ಮಣ ಸವದಿಯವರ ಒಂದು ವರ್ಷದ ಹಿಂದಿನ ಭಾಷಣ ಹಾಕಿದ್ರೆ, ಆ ಲಕ್ಷ್ಮಣ ಸವದಿಯವರಿಗೆ ಮುಜುಗರ ಆಗುತ್ತದೆ ಎಂದು ಚಾಟಿ ಬೀಸಿದ್ದಾರೆ.