ಬೆಂಗಳೂರು ಗ್ರಾಮಾಂತರ : ಜಿಲ್ಲಾ ಆರೋಗ್ಯಾಧಿಕಾರಿ (DHO) ಸುನೀಲ್ ಕುಮಾರ್ ತಮಗೆ ನಿರಂತರ ಕಿರುಕುಳ ನೀಡುತ್ತಿದ್ದು ನನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೇ ಅದಕ್ಕೆ ಡಿಎಚ್ಒ ನೇರ ಹೊಣೆ ಎಂದು ದೂರಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮವಾಗಿ ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿರುವುದನ್ನು ಬಯಲಿಗೆಳೆದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ್, ಜಿಲ್ಲೆಯ ಮತ್ತಷ್ಟು ಆಸ್ಪತ್ರೆಗಳ ಕರ್ಮಕಾಂಡವನ್ನು ಬಯಲು ಮಾಡುವ ತಯಾರಿ ನಡೆಸುತ್ತಿದ್ದಾರೆ, ಈ ವಿಚಾರ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಸುನೀಲ್ ಮೂರು ದಿನಗಳಿಗೊಂದು ನೋಟೀಸ್ ನೀಡುವ ಮೂಲಕ ನಿರಂತರ ಕಿರುಕುಳು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಬಿಜೆಪಿಗೆ ಗುಡ್ಬೈ ಹೇಳಿದ ಸಂಸದ ಬಿ.ಎನ್.ಬಚ್ಚೇಗೌಡ!
ಇತ್ತೀಚೆಗೆ ಜಿಲ್ಲೆಯ ನೆಲಮಂಗಲ ತಾಲೂಕಿನ ಆಸರೆ ಆಸ್ಪತ್ರೆಯ 74 ಗರ್ಭಪಾತ ಪ್ರಕರಣದ ಕರ್ಮಕಾಂಡ ಪತ್ತೆಯಾಗಿತ್ತು. ಈ ವರದಿಯನ್ನು ಬಯಲುಮಾಡದಂತೆ ಒತ್ತಡ ಹೇರಲಾಗಿತ್ತು, ಒತ್ತಡದ ನಡುವೆಯೂ ಆಸರೆ ಆಸ್ಪತ್ರೆಯ ಕರ್ಮಕಾಂಡವನ್ನು ಬಯಲು ಮಾಡಿ ಕೇಸ್ ದಾಖಲಿಸಿದ್ದರು.
ಇದೀಗ ಹೊಸಕೋಟೆಯ ಓವಂ ಆಸ್ಪತ್ರೆಯಲ್ಲಿ MTP ಖಾಯ್ದೆಯಡಿ ಅನುಮತಿ ಪಡೆಯದೆ ಗರ್ಭಪಾತ ಮಾಡಿರುವುದು ಪತ್ತೆಯಾಗಿದ್ದು ವರದಿಯನ್ನು ಬಯಲು ಮಾಡದಂತೆ ಮಂಜುನಾಥ್ಗೆ ಜಿಲ್ಲಾ ವೈದ್ಯಾಧಿಕಾರಿ ಸುನೀಲ್ ಕುಮಾರ್ ಅವರು ಕಿರುಕುಳ ನೀಡುತ್ತಿದ್ದಾರೆ. ಮೂರು ದಿನಗಳಿಗೊಮ್ಮೆ ನೋಟಿಸ್ ನೀಡುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಡಿಎಚ್ಒ ಮಾನಸಿಕ ಕಿರುಕುಳ ಹಿನ್ನೆಲೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಜೀವ ಕಳೆದುಕೊಂಡರೆ ಡಿಹೆಚ್ಒ ಕಾರಣ ಎಂದು ಉಲ್ಲೇಖಿಸಿ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತಾಲಯಕ್ಕೆ ಪತ್ರ ಬರೆದಿದ್ದಾರೆ.