ಮಂಡ್ಯ : ಈವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರೆಂಬುದಕ್ಕೆ ತೆರೆ ಬಿದ್ದಿದೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರ ಅಭ್ಯರ್ಥಿ. ಹಾಗಂತ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಪಾಂಡವಪುರದಲ್ಲಿ ಹೇಳಿದ್ದಾರೆ.
ಕುಮಾರಸ್ವಾಮಿ ಆಸ್ಪತ್ರೆಯಿಂದ ಬಂದ ನಂತರ ಅವರೇ ಹೇಳುತ್ತಾರೆ. ನಾವು ಮಂಡ್ಯ, ಹಾಸನ, ಕೋಲಾರ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿ ಹೋಗಲಿ. ನಾವೆಲ್ಲರೂ ದೇವೇಗೌಡರ ಆಶೀರ್ವಾದ ಹಾಗೂ ನರೇಂದ್ರ ಮೋದಿಯವರ ಸಹಕಾರದಿಂದ ಒಗ್ಗಟ್ಟಿನಿಂದ ಕುಮಾರಸ್ವಾಮಿ ಅವರನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಂಡ್ಯ ಅಂದ್ರೆ ಇಂಡಿಯಾ ಎಂಬ ಹೆಸರಿದೆ
ಒಂದೆಡೆ ಸಂಸದೆ ಸುಮಲತಾ ದೆಹಲಿಗೆ ತೆರಳಿ ಟಿಕೆಟ್ಗಾಗಿ ಲಾಬಿ ನಡೆಸಿದ್ರು. ಆದ್ರೆ, ಬಿಜೆಪಿ ಹೈಕಮಾಂಡ್ ಮಣೆ ಹಾಕಿಲ್ಲ ಎನ್ನಲಾಗ್ತಿದೆ. ಈ ಬಗ್ಗೆ ಮಾತಾಡಿರೋ ಪುಟ್ಟರಾಜು, ಸುಮಲತಾ ಅವರೊಂದಿಗೆ ನಾವು ಮಾತನಾಡುತ್ತೇವೆ. ಈ ಹಿಂದೆ ನಮ್ಮ ಅವರ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳಿತ್ತು. ರಾಜಕೀಯದಲ್ಲಿ ಯಾರೂ ಶತೃವೂ ಅಲ್ಲ ಮಿತ್ರರೂ ಅಲ್ಲ. ಮಂಡ್ಯ ಅಂದ್ರೆ ಇಂಡಿಯಾ ಎಂಬ ಹೆಸರಿದೆ. ಅದಕ್ಕೆ ನಾವು ಹೊಸ ನಾಂದಿ ಹಾಡಲು ಕುಮಾರಸ್ವಾಮಿಯವರನ್ನು ತರುತ್ತಿದ್ದೇವೆ ಎಂದು ಹೇಳಿದ್ದಾರೆ.
ಮೈತ್ರಿ ಅಭ್ಯರ್ಥಿಗೆ ಸಪೋರ್ಟ್ ಮಾಡ್ತಾರಾ?
ಒಟ್ಟಾರೆ, ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಹುತೇಕ ಖಚಿತವಾದಂತಾಗಿದೆ. ಇನ್ನು ಸಂಸದೆ ಸುಮಲತಾ ಅಂಬರೀಶ್ ಅವರ ನಡೆ ಏನು ಎಂಬುದು ಮಾತ್ರ ನಿಗೂಢವಾಗಿದೆ. ಅವರು ಮೈತ್ರಿ ಅಭ್ಯರ್ಥಿಗೆ ಸಪೋರ್ಟ್ ಮಾಡ್ತಾರಾ? ಇಲ್ಲ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳೀತಾರಾ? ಎಂದು ಕಾದು ನೋಡಬೇಕಿದೆ.