ರಾಮನಗರ : ಜೆಡಿಎಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಪಾದಕ್ಕೆ ಅಡ ಇಟ್ಟಿದ್ದಾರೆ. ಮುಂದೆ ಕುಮಾರಸ್ವಾಮಿ ಅವರ ಸ್ಥಿತಿ ಏನು..? ಎಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದು ಒಕ್ಕಲಿಗ ಸಮುದಾಯ. ಈಗ ಎರಡು ಸೀಟು ಪಡೆಯೋಕೆ ತಿಣುಕಾಡ್ತಿದ್ದಾರೆ ಎಂದು ಕುಟುಕಿದರು.
ಕುಮಾರಸ್ವಾಮಿ ಅವರು ಯಾವ ಪಕ್ಷದ ಜೊತೆ ಹೋದರೂ ಅಸಮಾಧಾನ ಹೊರಹಾಕುತ್ತಾರೆ. ಇನ್ನೂ ಒಂದು ತಿಂಗಳ ಬಳಿಕ ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಹೇಗೆ ಬೈತಾರೆ ನೋಡಿ. ಅವರು ಎಲ್ಲೋದ್ರೂ ಕೂಡಾ ಎಲ್ಲರನ್ನೂ ಬೈದುಕೊಂಡೆ ಆಚೆ ಬರ್ತಾರೆ ಎಂದು ಚಾಟಿ ಬೀಸಿದರು.
ಜೆಡಿಎಸ್ ಕಥೆ ಮುಗಿಸಿದ್ದಾರೆ
ಒಕ್ಕಲಿಗರೆಲ್ಲಾ ಜೆಡಿಎಸ್ ಪಕ್ಷ ನಂಬಿದ್ದರು. ಅಂತಹ ಪಕ್ಷವನ್ನ ತೆಗೆದುಕೊಂಡು ಹೋಗಿ ಮೋದಿ ಪಾದದ ಅಡಿ ಇಟ್ಟಿದ್ದೀರಿ. ಈಗ ಒಕ್ಕಲಿಗರ ಸ್ಥಿತಿ ಏನಾಗಬೇಕು..? ಮೈತ್ರಿ ಸರ್ಕಾರದಲ್ಲಿ ಸಿಎಂ ಕ್ಯಾಂಡಿಡೇಟ್ ಅಂತ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರು ಘೋಷಣೆ ಮಾಡಲು ಸಾಧ್ಯವೇ..? ಅವರು ಘೋಷಣೆ ಮಾಡಿಸಲಿ ನಾವೂ ಕೂಡಾ ಸಪೋರ್ಟ್ ಮಾಡ್ತೇವೆ. ಒಕ್ಕಲಿಗರ ಪಾರುಪತ್ಯ ಇದ್ದ ಜೆಡಿಎಸ್ ಕಥೆ ಮುಗಿಸಿದ್ದಾರೆ ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಹರಿಹಾಯ್ದರು.