ಬೆಳಗಾವಿ : ಬಂಗಾರಪ್ಪ ಕುಟುಂಬ ಒಂದಾಗಿಸಲು ನಾನ್ಯಾರು? ನಾನು ಅವರ ಮನೆಯ ಅಳಿಯ ಅಷ್ಟೇ.. ನಾನು ಅವರ ಮಗನಲ್ಲ ಎಂದು ನಟ ಶಿವರಾಜ್ಕುಮಾರ್ ಕಡ್ಡಿ ಮುರಿದಂತೆ ಹೇಳಿದರು.
ಕುಮಾರ್ ಬಂಗಾರಪ್ಪ ಚುನಾವಣೆ ಪ್ರಚಾರಕ್ಕೆ ಬರ್ತಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅದೆಲ್ಲವೂ ಗೊತ್ತಿಲ್ಲ ಸರ್ ನನಗೆ ಎಂದು ತಿಳಿಸಿದರು.
ಬಂಗಾರಪ್ಪ ಕುಟುಂಬ ಒಂದಾಗಿಸಲು ಶಿವಕುಮಾರ್ ಮುಂದಾಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ, ನೋಡಿ ಅವರನ್ನ ಒಂದು ಮಾಡೋಕೆ ನಾನ್ಯಾರು? ಅದಾಗಿಯೇ ಒಂದಾಗಬೇಕು ಅಷ್ಟೇ.. ನಾನೇನು ಮಾಡಕ್ಕಾಗಲ್ಲ. ನಾನು ಅವರ ಅಳಿಯ ಹೊರತು ಅವರ ಮಗ ಅಲ್ಲ ಎಂದು ಪುನರುಚ್ಚರಿಸಿದರು.
ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಬರ್ತಾರಾ?
ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಬರ್ತಾರಾ? ಎಂಬ ಪ್ರಶ್ನೆಗೆ, ಇನ್ನೂ ನಾವು ಯಾರಿಗೂ ತೊಂದರೆ ಕೊಡುವುದಕ್ಕೆ ಹೋಗಿಲ್ಲ. ಈ ಬಾರಿ ಬಿಸಿಲು ಜಾಸ್ತಿಯಿದೆ, ಅವರು ಪಾಪ ಒತ್ತಡದಿಂದ ಚುನಾವಣಾ ಪ್ರಚಾರಕ್ಕೆ ಬರಬಾರದು. ನಾನು ಕರೆದ್ರೆ ಬರ್ತಾರೆ. ಹಾಗಂತ ಅವರನ್ನ ಕರೆಯುವುದಕ್ಕೆ ಹೋಗಬಾರದು. ನಮ್ಮ ನಟರಿಗೆ ಯಾವಾಗಲೂ ಸ್ಪೆಸ್ ಕೊಡಬೇಕು. ಇರೋ ಪ್ರೀತಿ ವಿಶ್ವಾಸ ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಎಂಪಿ ಆಗಬೇಕೆಂದೇ ಚುನಾವಣೆಗೆ ಬಂದಿರೋದು
ಲೋಕಸಭೆ ಚುನಾವಣೆ ಸಿದ್ಧತೆ ನಡೆಯುತ್ತಿದೆ. ಯಾವಾಗಿಂದ ಚುನಾವಣಾ ಪ್ರಚಾರಕ್ಕೆ ಹೋಗಬೇಕು ಅನ್ನೋದು ತೀರ್ಮಾನ ಆಗಿಲ್ಲ. ಯಾವಾಗ ಹೋಗಬೇಕು ಅವಾಗ ಹೋಗ್ತೀನಿ. ಈ ಬಾರಿ ಪೂರ್ತಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಗೀತಾ ಸಂಸದರಾಗಬೇಕೆಂದೇ ಚುನಾವಣೆಗೆ ಬಂದಿರೋದು ಎಂದು ಶಿವರಾಜ್ಕುಮಾರ್ ಸ್ಪಷ್ಟಪಡಿಸಿದರು.