ಕಾರವಾರ : ಜಿ-20 ಸಮಾವೇಶಕ್ಕೆ ಇಡೀ ಜಗತ್ತು ಬಂದು ನಮ್ಮ ದೇಶವನ್ನ, ಮೋದಿಯನ್ನ ಹೊಗಳಿದ್ರು. ಆದ್ರೆ, ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ, ಎಲ್ಲಿದಾರೋ ಗೊತ್ತಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಟೀಕಿಸಿದರು.
ಕಾರವಾರದಲ್ಲಿ ಮಾತನಾಡಿದ ಅವರು, ಬಹುತೇಕ ಕೆಲವರು ಹೇಳಿದ್ರು. ಆಲೂಗಡ್ಡೆಯಿಂದ ಬಂಗಾರ ತೆಗೀತಿದಾರೆ ಅಂತ. ಇಡೀ ಜಗತ್ತು ಬಂದು ದೇಶವನ್ನ ಹಾಡಿ ಹೊಗಳಿದ್ರೂ, ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲ ಎಂದು ಕುಟುಕಿದರು.
ನೈತಿಕವಾಗಿ ಕಾಂಗ್ರೆಸ್ಗೆ ನಿಲುವೇ ಇಲ್ಲ, ಸಂಘಟನಾತ್ಮಕವಾಗಿಯೂ ಕಾಂಗ್ರೆಸ್ ದಿವಾಳಿಯಾಗಿದೆ. ಅದೆಷ್ಟರ ಮಟ್ಟಿಗೆ ಕಾಂಗ್ರೆಸ್ ದಿವಾಳಿಯಾಗಿದೆ. ದೇಶದಲ್ಲಿ ಹೊಸ ಭರವಸೆ ಬರಬೇಕಾದ್ರೆ ಶಾಂತಿ, ನೆಮ್ಮದಿ ಸಿಗಬೇಕಾದ್ರೆ ಬಿಜೆಪಿ ಗೆಲ್ಲಬೇಕು. ಕುರುಡರಿಗೆ ಹೆಚ್ಚು ತಿಳಿಸಬೇಕಾದ ಅವಶ್ಯಕತೆಯಿಲ್ಲ, ಅವರಿಗೆ ಜಗತ್ತು ನೋಡೋದಕ್ಕಾಗುವುದಿಲ್ಲ. ಆದ್ರೆ, ಪೂರ್ವಾಗ್ರಹಪೀಡಿತ ಕುರುಡರಿಗೆ ಹೇಳಿದ್ರೂ ಕೇಳುವುದಿಲ್ಲ ಎಂದು ಜಾಡಿಸಿದರು.
ಅವರ ಎದೆ ಬಗೆದರೂ ಸಹ ಸತ್ಯ ಸಿಗುದಿಲ್ಲ
ಕಾಂಗ್ರೆಸ್ನವರು ಯಾವತ್ತೂ ಅಪಪ್ರಚಾರವನ್ನೇ ಮಾಡಿದ್ದು, ಪ್ರಚಾರ ಮಾಡಿಲ್ಲ. ಸುಳ್ಳು ಮತ್ತು ಸತ್ಯ ಹೇಗಿರತ್ತೆ ಅಂದ್ರೆ, ಸತ್ಯ ಎದ್ದು ಕೂರುವ ಮೊದಲು ಸುಳ್ಳು ಇಡೀ ಜಗತ್ತು ಸುತ್ತಿ ಬಂದಿತ್ತಂತೆ. ಸತ್ಯ ಎದ್ದು ಕುಂತಾಗ ಸುಳ್ಳಿನ ಪರಿಸ್ಥಿತಿ ಏನು ಅಂತ ಇಡೀ ಜಗತ್ತಿಗೆ ಗೊತ್ತಾಗುತ್ತೆ. ಸುಳ್ಳು ಸತ್ಯದ ಕೋಟ್ ಹಾಕಿಕೊಂಡು ಊರೆಲ್ಲಾ ಸುತ್ತಾಡಿತ್ತು, ಜನ ಸತ್ಯವೇ ಓಡಾಡುತ್ತಿದೆ ಅಂದುಕೊಂಡಿದ್ರು. ಇವತ್ತು ಕಾಂಗ್ರೆಸ್ನವರ ಪರಿಸ್ಥಿತಿನೂ ಹೀಗೇನೆ, ಮುಖವಾಡದ ಬದುಕು ಕಾಂಗ್ರೆಸ್ನವರದ್ದು. ಅವರ ಎದೆ ಬಗೆದರೂ ಸಹ ಸತ್ಯ ಸಿಗಲ್ಲ. ನೀತಿ, ನೀಯತ್ತು, ದೇಶದ ಬಗ್ಗೆ ಒಳ್ಳೆಯ ಅಭಿಪ್ರಾಯ ಸಿಗಲ್ಲ ಎಂದು ಅನಂತಕುಮಾರ್ ಹೆಗಡೆ ವಾಗ್ದಾಳಿ ನಡೆಸಿದರು.