ಬೆಳಗಾವಿ : ನಾವೆಲ್ಲಾ ಕುರ್ಚಿಗಾಗಿ ಹೊಡೆದಾಡುತ್ತೇವೆ, ನೀವು ಕುರ್ಚಿ ಇದ್ದರೂ ಯಾಕೆ ಕುಳಿತುಕೊಳ್ಳಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕೃಷಿ ಉಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾಷಣ ಆರಂಭದಲ್ಲಿ ರೈತರಿಗೆ ಕುರ್ಚಿಗಳ ಮೇಲೆ ಕುಳಿತುಕೊಳ್ಳಲು ಡಿಕೆಶಿ ಸಲಹೆ ನೀಡಿದರು.
ನಾವೆಲ್ಲಾ ಕುರ್ಚಿಗಾಗಿ ಹೊಡೆದಾಡುತ್ತೇವೆ, ನೀವು ಕುರ್ಚಿ ಇದ್ರೂ ಯಾಕೆ ಕುಳಿತುಕೊಳ್ಳಲ್ಲ. ಸರ್ಕಾರ ನಿಮ್ಮನ್ನು ಗುರುತಿಸಿ ಸುವರ್ಣಸೌಧದ ಮುಂದೆ ಕರೆಯಿಸಿ ರೈತರಿಗೆ ಸಹಾಯ ಮಾಡ್ತಿದೆ. ಇದು ನಿಮ್ಮ ಭಾಗ್ಯ, ನಿಮ್ಮನ್ನು ನೋಡುವುದು ನಮ್ಮ ಭಾಗ್ಯ. ಪ್ರಜಾಪ್ರಭುತ್ವದಲ್ಲಿ ನಾಲ್ಕು ಆಧಾರ ಸ್ತಂಭ ಮುಖ್ಯ. ಸಮಾಜದಲ್ಲಿ ಕೃಷಿಕ, ಸೈನಿಕ, ಶಿಕ್ಷಕ, ಕಾರ್ಮಿಕ ಮುಖ್ಯ ಎಂದು ತಿಳಿಸಿದರು.
ನಾವು ನಿಮ್ಮನ್ನ ಕೈ ಹಿಡಿದಿದ್ದೇವೆ
ಸಚಿವ ಎನ್. ಚಲುವನಾರಾಯಣಸ್ವಾಮಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ. ಅವರ ತಂದೆ ಈಗಲೂ ಕೃಷಿಕರಿದ್ದಾರೆ. ನಾವು ನಿಮ್ಮನ್ನ ಕೈ ಹಿಡಿದಿದ್ದೇವೆ, ನೀವು ನಮ್ಮನ್ನ ಕೈ ಹಿಡಿಯಿರಿ ಎಂದು ಮನವಿ ಮಾಡಿದರು.
ನೀವೆಲ್ಲರೂ ನಮ್ಮನ್ನ ಕೈ ಹಿಡಿಯಿರಿ
ರೈತರಿಗೆ ಶಕ್ತಿ ಕೊಟ್ಟು ನಮ್ಮ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ ಅಂತ ಇಲ್ಲಿಗೆ ಬಂದಿದ್ದೇವೆ. ಪ್ರಜಾಧ್ವನಿ ಯಾತ್ರೆ ಇಲ್ಲಿಂದ ಆರಂಭ ಮಾಡಿದೆವು. 36 ಸಾವಿರ ಕೋಟಿ ಹಣವನ್ನು ಗೃಹಲಕ್ಷ್ಮಿಯವರಿಗೆ ನೀಡುತ್ತಿದ್ದೇವೆ. ಐದು ಗ್ಯಾರಂಟಿ, ನಮ್ಮ ಐದು ಬೆರಳು, ಒಂದು ಮುಷ್ಠಿ ಇದ್ದಹಾಗೆ. ನೀವೆಲ್ಲರೂ ನಮ್ಮನ್ನ ಕೈ ಹಿಡಿಯಿರಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.