Wednesday, May 8, 2024

ರಾಮನ ಬಗ್ಗೆ ಅವಹೇಳನಕಾರಿ ಡೈಲಾಗ್ ; ನೆಟ್‌ಫ್ಲಿಕ್ಸ್‌ನಿಂದ ‘ಅನ್ನಪೂರ್ಣಿ’ ಸಿನಿಮಾ ಡಿಲೀಟ್‌ ; VHPಗೆ ಕ್ಷಮೆ ಕೇಳಿದ ಜೀ ಸ್ಟುಡಿಯೋಸ್‌!

ಬೆಂಗಳೂರು: ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಅಭಿನಯದ ʼಅನ್ನಪೂರ್ಣಿʼ ಚಿತ್ರ ಇತ್ತೀಚಿಗೆ ತೆರಕಂಡು ಬಳಿಕ ವಿವಾದಾತ್ಮಕ ಹೇಳಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಆರೋಪ ಕೇಳಿಬಂದಿದೆ. 

ʼಅನ್ನಪೂರ್ಣಿʼ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಿತ್ತು. ಟೈಟಲ್‌ ರೋಲ್‌ನಲ್ಲಿ ನಯನತಾರಾ ಕಾಣಿಸಿಕೊಂಡಿರುವ ಈ ಸಿನಿಮಾ ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ‘ಹಿಂದೂ ವಿರೋಧಿ’ ಎಂದು ಆರೋಪಿಸಿದ್ದರು.

ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ದೂರಿದ್ದರು. ಶಿವಸೇನೆ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು. ಇದಾದ ಬಳಿಕ ನೆಟ್​ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾವನ್ನು ಡಿಲೀಟ್ ಮಾಡಿದೆ.

ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ  ಕ್ಷಮೆ ಕೂಡ ಕೇಳಿದೆ. ಡಿಸೆಂಬರ್ 29ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಪ್ರಾರಂಭಿಸಿತ್ತು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಮೇಶ್ ಸೋಲಂಕಿ, “ನಾನು ಚಿತ್ರ ನಿರ್ಮಿಸಿರುವ ಹಿಂದೂ ವಿರೋಧಿ ಝೀ ಸ್ಟುಡಿಯೋ ಮತ್ತು ನೆಟ್‌ಫ್ಲಿಕ್ಸ್‌ ವಿರುದ್ಧ ದೂರು ದಾಖಲಿಸಿದ್ದೇನೆ. ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಜಗತ್ತು ಕಾತುರದಿಂದ ನಿರೀಕ್ಷಿಸುತ್ತಿರುವ ಸಮಯದಲ್ಲಿ, ಜೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಿಸಿದ ಈ ಹಿಂದೂ ವಿರೋಧಿ ಚಿತ್ರ ʼಅನ್ನಪೂರ್ಣಿʼ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆʼʼ ಎಂದು ಬರೆದುಕೊಂಡಿದ್ದರು.

 

ನಟಿ ನಯನತಾರಾ ಮೇಲೆ FIR ದಾಖಲು
ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್‌ ಅವರಿಗೆ ಮನವಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ʼಅನ್ನಪೂರ್ಣಿʼ ಚಿತ್ರದ ನಿರ್ದೇಶಕ ನಿಲೇಶ್‌ ಕೃಷ್ಣ, ನಟಿ ನಯನತಾರಾ, ನಿರ್ಮಾಪಕರಾದ ಜತಿನ್‌ ಸೇಥಿ, ಆರ್‌.ರವೀಂದ್ರನ್‌ ಮತ್ತು ಪುನೀತ್‌ ಗೋಯೆಂಕಾ, ಝೀ ಸ್ಟುಡಿಯೋಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶಾರಿಕ್‌ ಪಟೇಲ್‌ ಮತ್ತು ನೆಟ್‌ಫ್ಲಿಕ್ಸ್‌ ಇಂಡಿಯಾ ಹೆಡ್‌ ಮೋನಿಕಾ ಶೆರ್ಗಿಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

 

ವಿಎಚ್‌ಪಿಗೆ ಕ್ಷಮೆ ಕೇಳಿದ ಜೀ ಸ್ಟುಡಿಯೋಸ್‌!

ಈ ವಿವಾದದ ಬಳಿಕ ನೆಟ್​ಫ್ಲಿಕ್ಸ್ ಎಚ್ಚೆತ್ತುಕೊಂಡಿದೆ. ಈಗಾಗಲೇ ಸಿನಿಮಾನ ತೆಗೆಯಲಾಗಿದೆ. ವಿಶ್ವ ಹಿಂದೂ ಪರಿಷತ್​ಗೆ ಜಿ ಸ್ಟುಡಿಯೊ ಕ್ಷಮೆ ಕೇಳಿದೆ. ಜತೆಗೆ ವಿವಾದಾತ್ಮಕ ದೃಶ್ಯವನ್ನು ತೆಗೆಯುವ ಭರವಸೆ ನೀಡಿದೆ. ‘ನಮಗೆ ಧಾರ್ಮಿಕ ಭಾವನೆಗೆ ಹಾನಿ ಮಾಡುವ ಯಾವುದೇ ಉದ್ದೇಶ ಇಲ್ಲ. ನಾವು ಕ್ಷಮೆ ಕೇಳುತ್ತೇವೆ’ ಎಂದು ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ ತಿಳಿಸಿದೆ.

ರಮೇಶ್ ಸೋಲಂಕಿ ಹಿಂದೂ ವಿರೋಧಿ ದೃಶ್ಯಗಳು ಯಾವುವು ಎನ್ನುವುದನ್ನು ಪಟ್ಟಿ ಮಾಡಿ ಕೊಟ್ಟಿದ್ದರು. ʼʼ1. ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡುವ ವೇಳೆ ನಮಾಜ್‌ ಮಾಡುತ್ತಾಳೆ. 2. ಲವ್‌ ಜಿಹಾದ್‌ ಅನ್ನು ಪ್ರಚಾರ ಮಾಡಲಾಗಿದೆ. 3. ಫರ್ಹಾನ್‌ ಎನ್ನುವ ಪಾತ್ರ ಭಗವಾನ್‌ ಶ್ರೀರಾಮ ಮಾಂಸ ತಿನ್ನುವವರಾಗಿದ್ದರು ಎಂದು ಹೇಳುವ ದೃಶ್ಯ ಇದೆ. ನೆಟ್‌ಫ್ಲಿಕ್ಸ್‌ ಇಂಡಿಯಾ ಮತ್ತು ಝೀ ಸ್ಟುಡಿಯೋಸ್‌ ಉದ್ದೇಶಪೂರ್ವಕವಾಗಿ ಈ ಚಿತ್ರವನ್ನು ನಿರ್ಮಿಸಿದೆ. ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಯದಲ್ಲೇ ಚಿತ್ರ ಬಿಡುಗಡೆ ಮಾಡಲಾಗಿದೆ” ಎಂದು ಅವರು ಬರೆದಿದ್ದರು.

ಹಿರಿಯ ಕಲಾವಿದರಾದ ಕನ್ನಡಿಗ ಅಚ್ಯುತ್‌ ಕುಮಾರ್‌, ಸತ್ಯರಾಜ್‌, ಕಾರ್ತಿಕ್‌ ಕುಮಾರ್‌, ರೇಣುಕಾ, ಪಾರ್ವತಿ ಟಿ. ಮತ್ತಿತರರು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಾಹ್ಮಣ ಕುಟುಂಬದ ಯುವತಿ (ನಯನತಾರಾ) ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಸೇರಿ ಅಲ್ಲಿ ಯಾವೆಲ್ಲ ಸವಾಲುಗಳನ್ನು ಎದುರಿಸುತ್ತಾಳೆ ಎನ್ನುವುದೇ ಚಿತ್ರದ ಕಥೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ ಕೇವಲ 6 ಕೋಟಿ ರೂ. ಗಳಿಸಿದೆ.

 

RELATED ARTICLES

Related Articles

TRENDING ARTICLES