ಬೆಂಗಳೂರು : ಕುಮಾರಸ್ವಾಮಿ ಅವರು ಇಂತಹ ಸಂದರ್ಭದಲ್ಲಿ ಕೋಪಗೊಳ್ಳುವುದು, ಅಸಮಾಧಾನಗೊಳ್ಳೋದು ಸಹಜ. ನನ್ನ ಮೇಲೂ ಕೋಪಗೊಂಡು ಮಾತಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಐಟಿ ಅಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಒಂದು ಜವಬ್ದಾರಿ ಇದೆ. ಇಂತಹ ಘಟನೆಯನ್ನು ಲೈಟ್ ಆಗಿ ತಗೆದುಕೊಳ್ಳಲು ಆಗಲ್ಲ. ಕುಮಾರಸ್ವಾಮಿ ಅವರಿಗೂ ಗೊತ್ತು, ಅವರು ಮುಖ್ಯಮಂತ್ರಿ ಆಗಿದ್ದವರು. ವಕೀಲ ದೇವರಾಜೇಗೌಡ ಆರೋಪಕ್ಕೆ ನಾವು ಏನು ಹೇಳೋಕೆ ಆಗಲ್ಲ. ಎಲ್ಲವನ್ನೂ ಎಸ್ಐಟಿಯವರು ಗಮನಿಸುತ್ತಾರೆ. ಪೆನ್ಡ್ರೈವ್ ಮೂಲ ಎಲ್ಲವನ್ನೂ ಎಸ್ಐಟಿ ಗಮನಹರಿಸುತ್ತದೆ ಎಂದು ತಿಳಿಸಿದ್ದಾರೆ.
ಅನುಮಾನ ಪಡುವುದು ಬೇಡ, ಸರ್ಕಾರ ಸರಿಯಾಗಿ ನಿಭಾಯಿಸುತ್ತಿದೆ. ಡಿ.ಕೆ. ಶಿವಕುಮಾರ್ ಹಾಗೂ ಸರ್ಕಾರದ ವಿರುದ್ಧ ಆರೋಪ ಏನೇ ಇದ್ದರೂ ಎಸ್ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ. ಇದು ಕಾಂಗ್ರೆಸ್ ಮೈತ್ರಿ ಅವಧಿಯ ವಿಡಿಯೋ ಎಂದು ಪ್ರಧಾನಿ ಹೇಳಿದ್ದಾರೆ. ನೋಡೋಣ ಅದು ಯಾವ ಅವಧಿಯಲ್ಲಿ ಆಗಿದ್ದು ಅಂತ. ಎಸ್ಐಟಿ ತನಿಖೆಯಲ್ಲಿ ಅದೂ ಗೊತ್ತಾಗಲಿದೆ ಎಂದು ಕುಟುಕಿದ್ದಾರೆ.
ನಮಗೆ ಎಸ್ಐಟಿ ಆ ಮಾಹಿತಿ ತಿಳಿಸಲ್ಲ
ಒಮ್ಮೆ ಪ್ರಕರಣದ ತನಿಖೆ ಮುಗಿದ ಮೇಲೆ ಅದು ಪಬ್ಲಿಕ್ ಡೊಮೈನ್ಗೆ ಬರುತ್ತದೆ. ಯಾವುದನ್ನು ಮುಚ್ಚಿಡಲು ಆಗಲ್ಲ. ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿರಬಹುದು. ಆದರೆ, ನಮಗೆ ಅವರು ಆ ಮಾಹಿತಿ ತಿಳಿಸಲ್ಲ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.