ಬೆಂಗಳೂರು : ಆಗಸ್ಟ್ 15 ಅಥವಾ 16ರಂದು ಮನೆ ಯಜಮಾನಿ ಖಾತೆಗೆ 2,000 ರೂಪಾಯಿ ಹಣ ಹಾಕಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಆರ್ಥಿಕವಾಗಿ ದಿವಾಳಿ ಆಗದಂತೆ ನೋಡಿಕೊಂಡಿದ್ದೇವೆ ಎಂದರು.
ಜುಲೈ 16ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ಇದನ್ನೂ ಬಿಜೆಪಿಯವರು ಟೀಕೆ ಮಾಡಿದ್ರು. ಅತ್ತೆಗೋ, ಸೊಸೆಗೋ ಅಂತ ಲೇವಡಿ ಮಾಡಿದ್ದರು. ಇಲ್ಲೂ ಹುಳಿ ಹಿಂಡೋಕೆ ಹೊರಟಿದ್ದರು. ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಹಣವನ್ನು ಹೊಂದಿಸ್ತೇವೆ, ಖರ್ಚು ಮಾಡ್ತೇವೆ ಎಂದು ಕುಟುಕಿದರು.
ಆ.15 ಅಥವಾ 16ರಂದು 2,000 ರೂ.
ರಾಜ್ಯದ 1.30 ಕೋಟಿ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯಡಿ ಹಣ ನೀಡುತ್ತೇವೆ. ಆಗಸ್ಟ್ನಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಾಕುತ್ತೇವೆ. ಆಗಸ್ಟ್ 15 ಅಥವಾ 16ರಂದು ಮನೆ ಯಜಮಾನಿ ಖಾತೆಗೆ ಹಣ ಹಾಕಲಾಗುವುದು. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ತಿಳಿಸಿದರು.
ಇದನ್ನೂ ಓದಿ : ಅಲ್ಪಸಂಖ್ಯಾತರಿಲ್ಲದೆ ಕಾಂಗ್ರೆಸ್ಸಿಗರಿಗೆ ಉಸಿರಾಡಲೂ ಸಾಧ್ಯವಿಲ್ಲ : ಸುನಿಲ್ ಕುಮಾರ್
ವರ್ಷಕ್ಕೆ 52 ಸಾವಿರ ಕೋಟಿ ಹೊರೆ
ಬಜೆಟ್ ಗಾತ್ರ 3.27 ಲಕ್ಷ ಕೋಟಿ. ಹಿಂದೆ ಅವರು 3.9 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದರು. ನಮ್ಮ ಬಜೆಟ್ ೫ ಗ್ಯಾರಂಟಿಗಳನ್ನ ಹೊಂದಿದೆ. ಪ್ರಣಾಳಿಕೆಯಲ್ಲಿದ್ದ ಕೆಲವು ಭರವಸೆ ಈಡೇರಿಸಿದ್ದೇವೆ. ನಮ್ಮ ಗ್ಯಾರಂಟಿಗೆ ಬೇಕಾದ ಹಣ 35410 ಕೋಟಿ. ವರ್ಷಕ್ಕೆ 52 ಸಾವಿರ ಕೋಟಿ ಹೊರೆಬೀಳಲಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ದಿವಾಳಿ ಆಗುತ್ತೆ ಅಂದಿದ್ರು
ವಿಪಕ್ಷದವರು ದುಡ್ಡು ಎಲ್ಲಿಂದ ತರ್ತಾರೆ, ಗ್ಯಾರಂಟಿ ಜಾರಿ ಆಗಲ್ಲ ಅಂತ ಹೇಳ್ತಿದ್ರು. ಪ್ರಧಾನಿ ಮೋದಿ ಅವರು ಸರ್ಕಾರ ದಿವಾಳಿ ಆಗುತ್ತೆ ಅಂದಿದ್ದರು. 9 ವರ್ಷ ಪ್ರಧಾನಿಯಾದವರು ಹೀಗೆಂದಿದ್ದಾರೆ. ನಾವು ಗ್ಯಾರಂಟಿ ಕೊಟ್ಟಾಗಲೂ ಹೇಳಿದ್ದೆವು. ಈಗಲೂ ನಾನು ಹೇಳ್ತೇನೆ. ಕೊಟ್ಟ ಗ್ಯಾರಂಟಿಗೆ ಹಣ ಹೊಂದಿಸುತ್ತೇವೆ. ನಾವು ಕೊಟ್ಟ ಮಾತಿನಂತೆ 5 ಗ್ಯಾರಂಟಿ ಜಾರಿ ಮಾಡುತ್ತಿದ್ದೇವೆ. ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.