Thursday, May 9, 2024

KGF, ಕಬಾಲಿ ನಿರ್ಮಾಪಕರಲ್ಲಿ​ ಕಿಚ್ಚನ ಆಯ್ಕೆ ಯಾರು..?

ಕೆಜಿಎಫ್ ನಂತ್ರ ರಾಕಿಭಾಯ್ ಯಶ್ ಎಷ್ಟು ಕನ್ಫ್ಯೂಷನ್​​ನಲ್ಲಿ ಇದ್ದಾರೋ ಅದಕ್ಕಿಂತ ಕೊಂಚ ಜಾಸ್ತಿನೇ ತಲೆಕೆಡಿಸಿಕೊಂಡಿದ್ದಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್. ಯೆಸ್.. ಮುಂದಿನ ಸಿನಿಮಾ ಯಾವ ರೀತಿ ಇರಬೇಕು..? ಯಾರ ಜೊತೆ ಮಾಡಬೇಕು..? ಸಕ್ಸಸ್​ಗೆ ಏನೆಲ್ಲಾ ಸೂತ್ರಗಳನ್ನ ಅಳವಡಿಸಿಬೇಕು ಅನ್ನೋ ವಿಚಾರ ಸಾಕಷ್ಟು ರಿಸರ್ಚ್​ ಮಾಡ್ತಿದ್ದಾರೆ ಮಾಣಿಕ್ಯ. ಸದ್ಯ ಅವ್ರ ಮುಂದೆ ಎರಡು ದೊಡ್ಡ ಆಯ್ಕೆಗಳಿದ್ದು, ಮೊದಲ ಬೇಟೆ ಯಾವುದಾಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಓದಿ.

  • ಬರ್ತ್ ಡೇ ದಿನ ಮನೆಗೆ ಬಂದು ಹೋಗಿದ್ದ ಕಲೈಪುಲಿ ದಾನು
  • ಕಾರ್ತಿಕ್ ಗೌಡ ಜೊತೆ ರನ್ನನ ಸ್ಟಿಲ್.. ಸಂಥಿಂಗ್ ಸಂಥಿಂಗ್
  • ಆಲ್ ಇಂಡಿಯಾ ಕಟೌಟ್ ಮಾಸ್ಟರ್ ಪ್ಲಾನ್​ನಲ್ಲಿ ಏನಿದೆ..?

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳದ್ದೇ ದರ್ಬಾರ್. ಮೇಕಿಂಗ್, ಕಥೆ, ಪಾತ್ರಗಳ ಪೋಷಣೆ, ಬಾಕ್ಸ್ ಆಫೀಸ್ ಕಲೆಕ್ಷನ್ ಹೀಗೆ ಎಲ್ಲಾ ಌಂಗಲ್​ನಲ್ಲಿ ನಮ್ಮ ಕನ್ನಡ ಸಿನಿಮಾಗಳು ಪರಭಾಷಾ ಸಿನಿಮಾಗಳ ಮೇಲೆ ಸವಾರಿ ಮಾಡ್ತಿವೆ. ಸಿನಿಮಾ ಮಾಡಿದ್ರೆ ಹೀಗೆ ಮಾಡ್ಬೇಕು ಗುರು ಅಂತ ಎಲ್ರೂ ಮಾತಾಡಿಕೊಳ್ಳೋ ಹಾಗೆ ಕನ್ನಡ ಕಲಾವಿದರು ಹಾಗೂ ಟೆಕ್ನಿಷಿಯನ್ಸ್ ಹಾವಳಿ ಇಡ್ತಿದ್ದಾರೆ.

ಇದೀಗ ಟ್ರೆಂಡ್​ಸೆಟ್ ಮಾಡಿದಂತಹ ಸೂಪರ್ ಸ್ಟಾರ್​ಗಳು ಕೂಡ ತಮ್ಮ ಮುಂದಿನ ಪ್ರಾಜೆಕ್ಸ್ಟ್ ಬಗ್ಗೆ ಇನ್ನಿಲ್ಲದೆ ತಲೆಕೆಡಿಸಿಕೊಳ್ಳೋ ಹಾಗೆ ಆಗಿದೆ. ಹೌದು.. ವಿಕ್ರಾಂತ್ ರೋಣ ಬಳಿಕ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್, ಮುಂದಿನ ಸಿನಿಮಾ ಹೇಗೆ ಮಾಡಬೇಕು ಹಾಗೂ ಯಾರ ಜೊತೆ ಮಾಡ್ಬೇಕು ಅಂತ ಸಿಕ್ಕಾಪಟ್ಟೆ ದೊಡ್ಡ ಲೆಕ್ಕಾಚಾರದಲ್ಲಿದ್ದಾರೆ.

ಕಾರಣ ಅವ್ರ ಮುಂದೆ ಸಾಕಷ್ಟು ಆಯ್ಕೆಗಳಿವೆ. ವಿಕ್ರಾಂತ್ ರೋಣ ರಿಲೀಸ್ ಬಳಿಕ ಓಪನ್ ಸ್ಟೇಟ್​ಮೆಂಟ್ ನೀಡಿದ್ದ ಕಿಚ್ಚ, ಎಕ್ಸ್​ಪೆರಿಮೆಂಟ್ ಮಾಡದೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಮಾಡ್ತೀನಿ. ಇದೇ ಅನೂಪ್ ಭಂಡಾರಿ ಹಾಗೂ ಜಾಕ್ ಮಂಜು ಜೊತೆ ಮಾಡ್ತೀನಿ ಅಂದಿದ್ರು. ಆದ್ರೆ ಕೆಜಿಎಫ್, ಕಾಂತಾರ, ಚಾರ್ಲಿ 777, ಗಂಧದಗುಡಿ ಸಿನಿಮಾಗಳ ಕಂಟೆಂಟ್ ಇವ್ರ ಮನಸ್ಸನ್ನ ಬದಲಿಸಿದಂತಿದೆ. ಹಾಗಾಗಿಯೇ ಕಿಚ್ಚನ ಪ್ಲಾನ್ಸ್ ಬೇರೇನೇ ಇದೆ.

ಸೆಪ್ಟೆಂಬರ್​ನಲ್ಲಿ ಕಿಚ್ಚನ ಬರ್ತ್ ಡೇ ವಿಶೇಷ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಸುದೀಪ್​ಗೆ ಶುಭಾಶಯ ಕೋರಿದ್ರು ಕಬಾಲಿ ಪ್ರೊಡ್ಯೂಸರ್ ಕಲೈಪುಲಿ ಎಸ್ ದಾನು. ಅದೇ ದಿನ ಚಿನ್ನದ ಸರವೊಂದನ್ನ ಗಿಫ್ಟ್ ಮಾಡಿ, ಸಿನಿಮಾ ಮಾಡೋ ಮನ್ಸೂಚನೆ ಕೂಡ ನೀಡಿದ್ರು. ಅಸುರನ್, ಕರ್ಣನ್, ತೇರಿ, ಕಬಾಲಿ ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿರೋ ಕಲೈಪುಲಿ ಜೊತೆ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡ್ತಾರಾ ಕಿಚ್ಚ ಅನ್ನೋದು ಕಾದು ನೋಡಬೇಕು.

ಮತ್ತೊಂದ್ಕಡೆ ಕೆಜಿಎಫ್ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು. ಹೌದು.. ಕೆಜಿಎಫ್, ಕಾಂತಾರ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕಾರ್ತಿಕ್ ಗೌಡ, ಕಿಚ್ಚನೊಟ್ಟಿಗೆ ಇದ್ದ ಫೋಟೋ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಮೂಲಗಳ ಪ್ರಕಾರ ಕಿಚ್ಚನ ಡೇಟ್ಸ್ ಹೊಂಬಾಳೆ ಫಿಲಂಸ್​ಗೆ ಮೊದಲು ಸಿಗಲಿದೆ. ಅಲ್ಲಿಗೆ ಕಿಚ್ಚನ ಆಯ್ಕೆ ಹೊಂಬಾಳೆ ಫಿಲಂಸ್ ಆಗುತ್ತಾ ಅಥ್ವಾ ಕಲೈಪುಲಿ ಆಗ್ತಾರಾ ಅನ್ನೋದು ಅವರೇ ಖಚಿತಪಡಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES