Monday, May 6, 2024

ಪಿ ಟಿ ಮಾಸ್ತರ್ ಕ್ಯಾಚ್ ಹಾಕೋಕೆ ನಿಶ್ವಿಕಾ ಪ್ಲ್ಯಾನ್

ಕನ್ನಡ ಚಿತ್ರಲೋಕದಲ್ಲಿ ವಿಷ್ಣುದಾದ ಅಭಿನಯದ ಗುರು ಶಿಷ್ಯರು ಸಿನಿಮಾ ಇಂದಿಗೂ  ಅಜರಾಮರ. ಕಣ್ಮುಚ್ಚಿ ಈ ಚಿತ್ರದ ಸೀನ್ಸ್​​ಗಳನ್ನ ನೆನಪು ಮಾಡ್ಕೊಂಡ್ರೆ ಸಾಕು ಮುಖದಲ್ಲಿ ಮಂದಹಾಸ ಮೂಡುತ್ತೆ . ಇನ್ನು, ಇದೇ ಟೈಟಲ್​ ಮೇಲೆ ಶರಣ್​ ಅಭಿನಯದ ಮತ್ತೊಂದು ಸಿನಿಮಾ ತೆರೆಗೆ ಬರ್ತಿದೆ. ಎಲ್ಲರ ನಿದ್ದೆಗೆಡಿಸಿರೋ ಈ ಚಿತ್ರ ಒಂದಿಲ್ಲೊಂದು ಸುದ್ದಿ ಮಾಡ್ತಾ ಹೈಪ್​ ಕ್ರಿಯೇಟ್ ಮಾಡ್ತಿದೆ. ಇದೀಗ ಈ ಚಿತ್ರದ ಸಾಂಗ್​ ಟಾಪ್​ ಟ್ರೆಂಡಿಂಗ್​ನಲ್ಲಿದೆ.

ಗುರು ಶಿಷ್ಯರ ಗಾನಬಜಾನಕ್ಕೆ ತಲೆದೂಗಿದ ಫ್ಯಾನ್ಸ್

ಪಿ ಟಿ ಮಾಸ್ತರ್ ಕ್ಯಾಚ್ ಹಾಕೋಕೆ ನಿಶ್ವಿಕಾ ಪ್ಲ್ಯಾನ್

ಶರಣ್ ಕಾಲೆಳೆದ ಕ್ರೇಜಿಸ್ಟಾರ್.. ನಕ್ಕು‌ನಗಿಸಿದ ರವಿಮಾಮ..!

ಪಿಟಿ ಮಾಸ್ಟರ್ ಲವ್ ಜೊತೆಗೆ ಗುರು ಶಿಷ್ಯರ ಎಮೋಷನ್

ಶರಣ್ ಸಿನಿಮಾಗಳಂದ್ರೆ ಅಲ್ಲಿ ಹೊಟ್ಟೆ ಹುಣ್ಣಾಗೋ ಕಾಮಿಡಿ. ಒಂದೊಳ್ಳೆ ಸಂದೇಶ, ಕ್ಯಾಚಿ ಸಾಲಿನ ಜವಾರಿ ಹಾಡುಗಳು ಪಕ್ಕಾ. ಮನರಂಜನೆಯ ರಸದೌತಣ ಉಣಬಡಿಸೋ ಕನ್ನಡದ ಪ್ರತಿಭಾನ್ವಿತ ಕಾಮಿಡಿ ಕಲಾವಿದ ಶರಣ್. ಪೋಷಕ ಪಾತ್ರಗಳಿಂದ ನಿವೃತ್ತಿ ಪಡೆದು, ಹೀರೋ ಆಗಿ ಮಿಂಚ್ತಿರೋ ಶರಣ್ ಸಿನಿಮಾಗಳಂದ್ರೆ ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆ. ಇದೀಗ, ಶರಣ್​ ಅಭಿನಯದ ಗುರು ಶಿಷ್ಯರ ಜುಗಲ್ ಬಂದಿ ನೋಡೋಕೆ ಚಿತ್ರರಸಿಕ ತುದಿಗಾಲಲ್ಲಿ ಕಾಯ್ತಿದ್ದಾ‌ನೆ.

ಗುರು ಶಿಷ್ಯರು ಸಿನಿಮಾ ಸೆಟ್ಟೇರಿದ ದಿನದಿಂದ್ಲೆ ಒಂದಿಲ್ಲೊಂದು ಹೈಪ್ ಕ್ರಿಯೇಟ್ ಮಾಡ್ತಾ ಚಿತ್ರ ರಸಿಕರ ಅಟೆನ್ಶನ್ ಕ್ರಿಯೇಟ್ ಮಾಡ್ತಿದೆ. 1995ರ ಕಥೆ ಆದರಿಸಿ ಶಾಲೆಗಳ ನಡುವೆ ನಡೆಯುವ ಕ್ರೀಡೆಯ ಮೇಲೆ ಸಿನಿಮಾ ತಯಾರಾಗಿದೆ. ಎಲ್ಲರ ಲೈಫಲ್ಲೂ ಸ್ಕೂಲ್ ಲೈಫ್ ಇಸ್ ಗೋಲ್ಡನ್ ಲೈಫ್. ಹಾಗಾಗಿ ಈ ಸಿನಿಮಾ ಕೂಡ ಎಲ್ಲರ ಮನಸ್ಸಿಗೂ ಟಚ್ ಆಗಲಿದೆ. ಚಿತ್ರದ ಮೋಷನ್ ಪೋಸ್ಟರ್​ಗೆ ಇಂಪ್ರೆಸ್ ಆಗಿದ್ದ ಚಿತ್ರಪ್ರೇಮಿಗಳಿಗೆ ಇದೀಗ ಮತ್ತೊಂದು ಭರ್ಜರಿ ಗಿಫ್ಟ್ ಸಿಕ್ಕಿದೆ. ಆಣೆ ಮಾಡಿ ಹೇಳುತೀನಿ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದ್ದು ಸರ್ಪ್ರೈಸ್ ಕೊಟ್ಟಿದೆ.

ಗುರು ಶಿಷ್ಯರು ಸಿನಿಮಾ, ಟೈಟಲ್​​ಗೆ ತಕ್ಕಂತೆ  ಶಾಲೆಯಲ್ಲಿ ನಡೆಯೋ ಮಾಸ್ತರ್ ಮತ್ತು ಶಾಲಾ ಮಕ್ಕಳ ನಡುವಿನ ಕಥೆ. ಇದ್ರ ಜೊತೆ ಹಳ್ಳಿ ಹುಡುಗಿ ನಿಶ್ವಿಕಾಗೆ ಸೀಟಿ ಮಾಸ್ಟರ್ ಶರಣ್ ಮೇಲೆ ಪ್ರೇಮ ಕಲರವ. ಕ್ಯಾಚ್ ಹಾಕಿ ಪಟ್ಟಾಯಿಸೋ ಪೋರಿಯಾಗಿ ನಿಶ್ವಿಕಾ ಆಣೆ ಮಾಡಿ ಹೇಳುತೀನಿ ಹಾಡಿನಲ್ಲಿ ಕಾಣಿಸಿದ್ದಾರೆ. ಈ ಹಾಡು ಪ್ರೇಕ್ಷಕರ ಎದೆಯಲ್ಲಿ ಪ್ರೀತಿಯ ಸೋನೆ ಮಳೆ ಸುರಿಸಿದೆ. ಜೊತೆಯಲ್ಲಿ ಸಿನಿಮಾ ಕುರಿತು ಕುತೂಹಲದ ತಂಗಾಳಿ ಕೂಡ ಬೀಸಿದೆ.

ಗುರು ಶಿಷ್ಯರು ಚಿತ್ರದ ಆಣೆ ಮಾಡಿ ಹೇಳುತೀನಿ ಹಾಡನ್ನು ಸ್ಯಾಂಡಲ್​ವುಡ್​​ ಕ್ರೇಜಿ ಸ್ಟಾರ್ ಸಮ್ಮುಖದಲ್ಲಿ ರಿಲೀಸ್ ಮಾಡಲಾಯಿತು. ವೇದಿಕೆಯಲ್ಲಿದ್ದ ಶರಣ್ ಕಾಲೆಳೆದ ಕ್ರೇಜಿ ಸ್ಟಾರ್ ರವಿಚಂದ್ರನ್ ತಮಾಷೆಯ ಜೊತೆಗೆ ನೆರೆದಿದ್ದ ಎಲ್ಲರನ್ನೂ ನಗಿಸಿದರು. ಇದ್ರ ಜೊತೆಗೆ ಶರಣ್ ಒಳಗೊಬ್ಬ ನಟ ಇದ್ದಾನೆ . ಎಲ್ಲಾ ಗೊತ್ತಿದ್ದು ಏನು ಗೊತ್ತಿಲ್ಲದ ತರಹ ಎಲ್ಲರ ಎದ್ರು ತಲೆ ತಗ್ಗಿಸಿ ನಿಲ್ತಾನೆ ಎಂದು ಹಾಡಿ ಹೊಗಳಿದ್ರು.

ಮೈಸೂರಿನ ಹಳ್ಳಿಯಲ್ಲಿನ 1995ರ ದಶಕದ ಕಥೆ ಇದು. ಪಿಟಿ ಮಾಸ್ಟರ್ ಆಗಿ ಶರಣ್ ಮಿಂಚಿದ್ರೆ ನೆಚ್ಚಿನ ಶಿಷ್ಯರಾಗಿ ಶಾಲಾ ಮಕ್ಕಳಿದ್ದಾರೆ. ಗುರು ಶಿಷ್ಯರ ನಡುವಿನ ಭಾಂದ್ಯವ್ಯದ ಕಥೆಯನ್ನು ನಿರ್ದೇಶಕ ಜಡೇಶಕುಮಾರ್ ಹಂಪಿ ತೋರಿಸೋ ಪ್ರಯತ್ನ ಮಾಡಿದ್ದಾರೆ. 13 ಮಕ್ಕಳಲ್ಲಿ ಆರು ಜನ ಮಕ್ಕಳು ಸ್ಟಾರ್ ನಟರ ಮಕ್ಕಳಾಗಿದ್ದು ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ.

ನಟ ಶರಣ್ ಸಹಭಾಗಿತ್ವದಲ್ಲಿ ತರುಣ್ ಕಿಶೋರ್ ಸುಧೀರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ರೆಟ್ರೋ ಸ್ಟೈಲ್​ನಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ತೆರೆಯ ಮೇಲೆ ಮ್ಯಾಜಿಕ್ ಮಾಡೋಕೆ ಸಜ್ಜಾಗಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್, ಮಾಸ್ತಿ ಸಂಭಾಷಣೆ ಚಿತ್ರಕ್ಕೆ ಮೈನ್ ಹೈಲೇಟ್ ಆಗಲಿದೆ. ಒಟ್ಟಾರೆ ಗುರು ಶಿಷ್ಯರ ಪ್ರೀತಿಯ ಬ್ರಹ್ಮಗಂಟಿನ ಬಾಂಧವ್ಯ ತಿಳಿಬೇಕಾದ್ರೆ ಸ್ವಲ್ಪ ದಿನ ಕಾಯಲೇ ಬೇಕು.

ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES