Wednesday, May 22, 2024

ಮಗಳ ಬಳಿ ಸಿಮ್ ಒಟಿಪಿ ಪಡೆದು ಷಡ್ಯಂತ್ರ : ಇಂಡಿ ಶಾಸಕರ ಸ್ಪಷ್ಟನೆ

ರಾಜ್ಯ : ಭಾರಿ ಸಂಚಲನ ಸೃಷ್ಟಿಸಿರುವ ಸಚಿವ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್‌ಮೇಲ್ ಯತ್ನ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದಾರೆ. ಈವರೆಗೆ ಎಂಟು ಜನರ ಹೇಳಿಕೆ ಪಡೆದಿರುವ ಪೊಲೀಸರು, ಆರೋಪಿಯ ಮೊಬೈಲ್ ಜಾಲಾಡಲು ಮುಂದಾಗಿದ್ದಾರೆ. ಈ ನಡುವೆ ಇಂಡಿ ಶಾಸಕ ತಮ್ಮ ಮಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿರುವ ಸಚಿವ ST ಸೋಮಶೇಖರ್ ಪುತ್ರನ ವಿಡಿಯೋ ಬ್ಲ್ಯಾಕ್ ಮೇಲ್ ಪ್ರಕರಣದ ತನಿಖೆಯನ್ನ ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದಾರೆ‌. ಆರೋಪಿ ರಾಹುಲ್ ಬಂಧಿಸಿ ಆತನ ಮೊಬೈಲ್ ಜಪ್ತಿ ಮಾಡಿ ಪೊಲೀಸರು ಪರಿಶೀಲಿಸಿದ್ದಾರೆ.ಈ ವೇಳೆ ಕೆಲವು ಡೇಟಾ ಡಿಲೀಟ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಡೇಟಾ ರಿಟ್ರೀವ್ ಮಾಡಲು ಪೊಲೀಸರು ಮೊಬೈಲ್‌ನ ಎಫ್ಎಸ್ಎಲ್‌ಗೆ ರವಾನಿಸಿದ್ದಾರೆ.

ಇನ್ನು ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ರಾಹುಲ್‌ಗೆ ಸಿಸಿಬಿ ಪೊಲೀಸರು ಫುಲ್ ಗ್ರಿಲ್ ನಡೆಸಿದ್ದಾರೆ. ಎಸಿಪಿ ಜಗನ್ನಾಥ ರೈ ನೇತೃತ್ವದ ತಂಡ ರಾತ್ರಿಯಿಡೀ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾರೆ. ಪ್ರಕರಣದಲ್ಲಿ ರಾಹುಲ್ ಅಲ್ಲದೆ, ಈವರೆಗೆ ಎಂಟು ಮಂದಿಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಸಚಿವ ಸೋಮಶೇಖರ್ ಅವರ ಪಿಎ ಗಳಾದ ಭಾನುಪ್ರಕಾಶ್, ಶ್ರೀನಿವಾಸ್ ಗೌಡ, ಸೋಮಶೇಖರ್ ಪುತ್ರ ನಿಶಾಂತ್, ಇಂಡಿ ಶಾಸಕ ಯಶವಂತರಾಯ ಪಾಟೀಲ್, ಅವರ ಪುತ್ರಿಯ ಹೇಳಿಕೆಯನ್ನ ಪೊಲೀಸರು ದಾಖಲಿಸಿದ್ದಾರೆ. ಆರೋಪಿ ರಾಹುಲ್‌ಗೆ ಒಟಿಪಿ ಕೊಟ್ಟಿದ್ದ ರಾಕೇಶ್ ಅಪ್ಪಣ್ಣನವರ್ ಹೇಳಿಕೆಯನ್ನ ಪೊಲೀಸರು ಪಡೆದುಕೊಂಡಿದ್ದಾರೆ. ಹಾಗೂ ಪ್ರಕರಣಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸೋ ಸಲುವಾಗಿ ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸ್ಕ್ರೀನ್ ಶಾಟ್‌ಗಳನ್ನು ಪರಿಶೀಲಿಸಿದ್ದಾರೆ.

ಇನ್ನು ಸಿಸಿಬಿ ಪೊಲೀಸರ ತನಿಖೆ ವೇಳೆ ಇಡೀ ಘಟನಾವಳಿಯ ಸಂಚು ಡಿಸೆಂಬರ್ 25 ರಂದು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ಡಿಸೆಂಬರ್ 25 ರಂದು ಶಾಸಕ ಯಶವಂತರಾಯ ಪಾಟೀಲ್‌ ಪುತ್ರಿಗೆ ಫೋನ್ ಮಾಡಿದ್ದ ರಾಕೇಶ್ ಅಪ್ಪಣ್ಣನವರ್ ಬ್ಯುಸಿನೆಸ್ ಸಲುವಾಗಿ ಒಟಿಪಿ ಪಡೆದಿದ್ದನಂತೆ. ಬಳಿಕ ಅಂದೇ ಒಟಿಪಿ ನಂಬರ್ ರಾಹುಲ್‌ಗೆ ರವಾನಿಸಿದ್ದನಂತೆ. ಅದೇ ದಿನ ವಿಡಿಯೋ ಶೇರ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ರು ಎನ್ನಲಾಗಿದೆ. ಇನ್ನೂ ತಮ್ಮ ಪುತ್ರಿ ಮೇಲೆ ಬಂದಿರುವ ಆಪಾದನೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಯಶವಂತರಾಯಗೌಡ ಪಾಟೀಲ್‌, ರಾಕೇಶ್ ಮತ್ತು ನನ್ನ ಮಗಳು ಸ್ಕೂಲ್ ಫ್ರೆಂಡ್ಸ್, ಸದ್ಯ ಆಕೆ ಯುಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬ್ಯುಸಿನೆಸ್ ಹೆಸರಲ್ಲಿ ಆಕೆಯ ಯುಕೆ ಸಿಮ್‌ನ ಒಟಿಪಿ ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಇದರ ಹಿಂದೆ ಇರುವ ಷಡ್ಯಂತ್ರ ಪತ್ತೆ ಹಚ್ಚುವಂತೆ ಒತ್ತಾಯಿಸಿದರು.

ಸದ್ಯ ಸಿಸಿಬಿ ಪೊಲೀಸರು ಆರೋಪಿ ರಾಹುಲ್‌ನನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಆದ್ರೆ, ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದರ ಹಿಂದಿನ ಅಸಲಿಯತ್ತು ಏನು ಎನ್ನುವುದು ಎಲ್ಲರ ಪ್ರಶ್ನೆ.

RELATED ARTICLES

Related Articles

TRENDING ARTICLES