Thursday, September 19, 2024

4 ನೇ ದಿನಕ್ಕೆ ಕಾಲಿಟ್ಟ ಶ್ರೀ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

ಕಲಬುರಗಿ : ಆರ್ಯ ಈಡಿಗ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶ್ರೀ ಶರಣಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಚಿತ್ತಾಪುರ ತಲುಪಿಸಿದೆ.ಪಟ್ಟಣದಲ್ಲಿ ಶ್ರೀಗಳ ಪಾದಯಾತ್ರೆಗೆ ತಾಲೂಕು ಆರ್ಯ ಈಡಿಗ ಸಂಘದಿಂದ ಭರ್ಜರಿ ಸ್ವಾಗತ ಸಿಕ್ಕಿತು. ಪಟ್ಟಣದ ಬಜಾಜ್ ಫಂಕ್ಷನ್ ಹಾಲ್‌ನಲ್ಲಿ ಬೃಹತ್ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಶ್ರೀಗಳು ನಮ್ಮ ಬೇಡಿಕೆಗಳ ಈಡೇರಿಕೆಗೆ ಸಚಿವ ಸುನೀಲ್‌ಕುಮಾರ್ ನೇತೃತ್ವದಲ್ಲಿ ಚರ್ಚೆ ನಡೆದಿದೆ ಎಂಬ ಸಿಹಿಸುದ್ದಿ ಪವರ್ ಟಿವಿ ಮೂಲಕ ಬಂದಿದ್ದು, ಕೇವಲ ಚರ್ಚೆಗಷ್ಟೆ ಸಿಮೀತವಾಗದೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಮೇಲೆ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಮೀಸಲಿಡುವುದು, ಗುಲ್ಬರ್ಗಾ ವಿವಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆ, ಸೇಂಧಿ ಇಳಿಸುವುದು ಮತ್ತು ಮಾರಾಟ ಮಾಡುವುದಕ್ಕೆ ಅನುಮತಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಿ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.

ಇನ್ನು ಪಾದಯಾತ್ರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗ್ತಿದ್ದು, ಮೈಸುಡುವ ಬಿಸಿಲೂ ಲೆಕ್ಕಿಸದೆ ಶ್ರೀ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ಕೈಗೊಂಡಿದ್ದು, ಸರ್ಕಾರಕ್ಕೆ ಕಿಂಚಿತ್ತು ಕಾಳಜಿಯಿಲ್ಲ ಅಂತಾ ಪಾದಯಾತ್ರೆ ಉಸ್ತುವಾರಿ ವಹಿಸಿರುವ ಜಿ.ಪಂ.ಸದಸ್ಯ ರಾಜೇಶ್ ಗುತ್ತೇದಾರ್ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್‌ ಮುಖಂಡ ಬಾಲರಾಜ್ ಗುತ್ತೇದಾರ್ ಮಾತನಾಡಿ, ಸರ್ಕಾರಗಳು ಯಾವುದೇ ಇರಲಿ. ಸಮುದಾಯ ಅಂತಾ ಬಂದಾಗ ಪಕ್ಷಾತೀತವಾಗಿ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗಾಗಿ ಶ್ರೀಗಳ ಪಾದಯಾತ್ರೆಗೆ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು.

ಅದೆನೇ ಇರಲಿ ರಣಬಿಸಿಲೂ ಲೆಕ್ಕಿಸದೆ ಆರೋಗ್ಯ ಬದಿಗಿಟ್ಟು ಆರ್ಯ ಈಡಿಗ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಶ್ರೀ ಪ್ರಣವಾನಂದ ಶ್ರೀಗಳು ಕೈಗೊಂಡಿರುವ ಪಾದಯಾತ್ರೆಯನ್ನು ಸರ್ಕಾರ ಹಗುರವಾಗಿ ಪರಿಗಣಿಸದೆ, ಈಡಿಗ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಬೇಡಿಕೆಗಳನ್ನು ಈಡೇರಿಸುತ್ತಾ..? ಕಾದು ನೋಡಬೇಕು.

RELATED ARTICLES

Related Articles

TRENDING ARTICLES