Monday, February 3, 2025

ಬಿ.ಎಸ್.ವೈ ಮುಖ್ಯಮಂತ್ರಿಯಾದ್ರೂ, ಕಂಟ್ರೋಲ್ ರಿಮೋಟ್ ಮಾತ್ರ ಇನ್ನೊಬ್ಬರ ಕೈಯಲ್ಲಿದೆ‌ : ಎನ್.ಎಚ್ ಕೋನರೆಡ್ಡಿ

ಗದಗ : ಬಿ.ಎಸ್.ಯಡಿಯೂರಪ್ಪ ರಾಜ್ಯ ಸರಕಾರದ ಮುಖ್ಯಮಂತ್ರಿಯಾದ್ರೂ, ಕಂಟ್ರೋಲ್ ರಿಮೋಟ್ ಮಾತ್ರ ಇನ್ನೊಬ್ಬರ ಕೈಯಲ್ಲಿದೆ‌ ಅಂತಾ‌ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಲೇವಡಿ ಮಾಡಿದ್ದಾರೆ.ಸರಕಾರದ‌ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಗದಗ ದಲ್ಲಿ ಪತ್ರಿಕಾ ಗೋಷ್ಟಿ ಏರ್ಪಡಿಸಿ ಮಾತನಾಡಿದ‌ ಕೋನರೆಡ್ಡಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸೂಪರ್ ಸಿಎಂ ನಂತೆ ವರ್ತಿಸುತ್ತಿದ್ದು, ರಾಜ್ಯ ಸರಕಾರದ ಸೂತ್ರದಾರಿಯಾಗಿದ್ದಾರೆ ಅಂತಾ ಆರೋಪಿಸಿದ್ರು. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಎರಡ್ಮೂರು ದಿನಗಳಲ್ಲಿ ಪ್ರಧಾನಿಗಳ ಭೇಟಿಗೆ ಅಪಾಯಿಂಟ್‌ಮೆಂಟ್ ದೊರೆಯುತ್ತಿತ್ತು. ಆದರೆ, ಇದೀಗ ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರಧಾನಮಂತ್ರಿಗಳ ಭೇಟಿಗೆ ಅವಕಾಶ ದೊರೆಯದೇ ದೆಹಲಿಯಿಂದ ವಾಪಸ್ಸಾಗುತ್ತಿದ್ದಾರೆ. ನೆರೆ ಹಾಗೂ ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ, ರಾಜ್ಯದಲ್ಲಿ ಸರಕಾರ ಇದೆ ಎಂಬ ಭಾವನೆಯೇ ಜನರಲ್ಲಿ ಮೂಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ತಂದು ರಾಜ್ಯಪಾಲರಿಂದ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುತ್ತಿದೆ. ಶಾಸನ ಸಭೆಗಳಲ್ಲಿ ವಿಸ್ತೃತ ಚರ್ಚೆ ಮೂಲಕ ನಿರ್ಧಾರವಾಗಬೇಕಿದ್ದ ಮಹತ್ವದ ಕಾಯ್ದೆಗಳನ್ನು ಹಿಂಭಾಗಿಲಿನಿಂದ ತಿದ್ದುಪಡಿಗೊಳಿಸಿರುವುದು ಜನವಿರೋಧಿ ನೀತಿಯಾಗಿದೆ. ಸರಕಾರದ ಈ ನಡೆ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳಿಗೆ ವರದಾನವಾಗಲಿದ್ದು, ರೈತರ ಪಾಲಿಗೆ ಮರಣ ಶಾಸನ ಬರೆದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ವೇತ ಪತ್ರಕ್ಕೆ ಆಗ್ರಹ

ಈ ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಕಾರದಲ್ಲಿ ಆಗಿರುವಷ್ಟು ಅಭಿವೃದ್ಧಿಯೂ ಕಳೆದ ಒಂದು ವರ್ಷದಲ್ಲಿ ಆಗಿಲ್ಲ. ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಈ ಭಾಗದ ಜನರು ತತ್ತರಿಸಿದ್ದಾರೆ. ಆದರೆ, ತಾತ್ಕಾಲಿಕ ಪರಿಹಾರ ನೀಡಿದ ಸರಕಾರ ಶಾಶ್ವತ ಪರಿಹಾರಕ್ಕೆ ಒತ್ತು ನೀಡಿಲ್ಲ. ಇದರಿಂದಾಗಿ ಈ ಭಾಗದ ಜನರು ಮತ್ತೆ ಪ್ರವಾಹದ ಆತಂಕ ಎದುರಿಸುವಂತಾಗಿದೆ. ರಾಜ್ಯದಲ್ಲಿ ಪ್ರವಾಹ ಪ್ರದೇಶದಲ್ಲಿ ಕೈಗೊಂಡ ಶಾಶ್ವತ ಪರಿಹಾರದ ಬಗ್ಗೆ ಸರಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

RELATED ARTICLES

Related Articles

TRENDING ARTICLES