ಮೈಸೂರು : ಜೀವನದಲ್ಲಿ ಸ್ವಲ್ಪ ಸಮಸ್ಯೆ ಬಂದ್ರೆ ಸಾಕು ಎಲ್ಲವೂ ಮುಗಿದೇ ಹೋಯ್ತು ಅಂತ ಕೈ ಕಟ್ಟಿ ಕುಳಿತುಕೊಳ್ಳುವವರೇ ಹೆಚ್ಚು. ಆದ್ರೆ ಮೈಸೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣ ಹೊಂಬಾಳ್ ದೃಷ್ಟಿ ಹೀನರಾದ್ರೂ ಸಾಧನೆಯ ಶಿಖರ ಏರಿದ್ದಾರೆ. ಅಂಧತ್ವವನ್ನ ಮೆಟ್ಟಿ ನಿಂತ ಇವ್ರು ಸಾಧನೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಡಾ.ಕೃಷ್ಣ ಹೊಂಬಾಳ್ ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಹೆಚ್.ಓ.ಡಿ. ಮೂಲತಃ ಧಾರವಾಡದಲ್ಲಿ ಜನಿಸಿ ಮೈಸೂರಿನಲ್ಲಿ ನೆಲೆಸಿದವರು. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡರೂ ದೃತಿಗೆಡದೆ ಸಾಧನೆಗೆ ಮುಂದಾದವರು. 52 ವರ್ಷ ವಯಸ್ಸಿನ ಡಾ.ಕೃಷ್ಣ ಹೊಂಬಾಳ್ ಸಾಧನೆ ಅಪರಿಮಿತವಾದದ್ದು. ಕಣ್ಣಿದ್ದವರೇ ಮಾಡಲಾಗದ ಸಾಧನೆಯನ್ನ ಕಣ್ಣಿಲ್ಲದಿದ್ರೂ ಮಾಡಿ ತೋರಿಸಿದವರು. ದೃಷ್ಟಿ ಇಲ್ಲದಿದ್ರೂ ಇವರ ಪ್ರತಿಭೆಗೆ ಮಾರುಹೋದ ಮೈಸೂರು ವಿವಿ ಆಡಳಿತ ಮಂಡಳಿ ಉನ್ನತ ಸ್ಥಾನಮಾನ ನೀಡಿ ಗುರುತಿಸಿದೆ. ಈ ಪರಿಣಾಮ ಡಾ.ಕೃಷ್ಣಹೊಂಬಾಳ್ ವಿಶೇಷ ವ್ಯಕ್ತಿಯಾಗಿ ಕಂಡುಬರುತ್ತಾರೆ.
ಹುಟ್ಟಿನಿಂದಲೇ ಅಂಧರಾದ ಡಾ.ಕೃಷ್ಣಹೊಂಬಾಳ್ ಸಾಕಷ್ಟು ಪರಿಶ್ರಮದಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದು 2010 ರಲ್ಲಿ ಮೈಸೂರು ವಿವಿ ಯಲ್ಲಿ ಡಾಕ್ಟರೇಟ್ ಪದವಿಗೆ ಭಾಜನರಾದವರು. ನಂತರ ಒಂದೊಂದೇ ಸಾಧನೆಗಳನ್ನ ತಮ್ಮ ಮುಡಿಗೇರಿಸಿಕೊಂಡು ಸಾಗಿದವರು. ಸಾಕಷ್ಟು ಪ್ರಶಸ್ತಿಗಳನ್ನ ಪಡೆದಿರುವ ಡಾ.ಕೃಷ್ಣಹೊಂಬಾಳ್ ರವರ ಸುಮಾರು 40 ಸಂಶೋಧನೆಯ ಪ್ರಬಂಧಗಳು ಪ್ರಕಟಗೊಂಡಿದೆ. ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ, ವಿಚಾರ ಸಂಕೀರ್ಣಗಳಲ್ಲಿ ಭಾಗಿಯಾದ ಹೆಗ್ಗಳಿಕೆ ಇವರದ್ದು. ಇವರ ಮಾರ್ಗದರ್ಶನದಲ್ಲಿ 7 ಸಂಶೋಧಕರು ಪಿಹೆಚ್ಡಿ ಪದವಿ ಪಡೆದಿದ್ದಾರೆ. 16 ವಿಧ್ಯಾರ್ಥಿಗಳು ಎಂಫಿಲ್ ಪದವಿ ಪಡೆದಿದ್ದಾರೆ. ಮತ್ತಷ್ಟು ಸಂಶೋಧಕರು ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಯಾವುದೇ ವ್ಯಕ್ತಿಯ ಸಾಧನೆಯ ಹಿಂದೆ ಓರ್ವ ಮಹಿಳೆಯ ಪಾತ್ರ ಇರುತ್ತದೆ ಎಂಬ ಮಾತಿದೆ. ಇದು ಡಾ.ಕೃಷ್ಣ ಹೊಂಬಾಳ್ ರವರಿಗೂ ಅನ್ವಯಿಸುತ್ತದೆ. ಇವರ ಎಲ್ಲಾ ಸಾಧನೆಯ ಹಿಂದೆ ಪತ್ನಿ ಶೈಲಾರವರ ತ್ಯಾಗ ಹೆಚ್ಚಿನದಾಗಿದೆ. ದೃಷ್ಟಿ ಇಲ್ಲದ ದಂಪತಿಯ ಪುತ್ರಿಯಾದ ಶೈಲಾ.ಕೆ.ಹೊಂಬಾಳ್ ರವರು ಇವರ ಜೀವನ ಸಂಗಾತಿಯಾಗಲು ಒಪ್ಪಿ ಎಲ್ಲಾ ಹಂತದಲ್ಲೂ ಸಾಥ್ ಕೊಟ್ಟಿದ್ದಾರೆ. ಪ್ರತಿಯೊಂದು ಚಟುವಟಿಕೆಯಲ್ಲೂ ಪತ್ನಿ ಶೈಲಾ ಬೆನ್ನೆಲುಬಾಗಿ ನಿಂತು ಸಾಧನೆಯ ಮೆಟ್ಟಿಲಾಗಿದ್ದಾರೆ. ಎಲ್ಲರೂ ಕಣ್ಣಿದ್ದವರನ್ನೇ ಮದುವೆ ಆದ್ರೆ ಇಂತಹವರನ್ನ ಮದುವೆ ಆಗೋರು ಯಾರು ಎಂದು ಹೇಳುವ ಶೈಲಾ.ಕೆ.ಹೊಂಬಾಳ್ ಇವರನ್ನ ಕೈ ಹಿಡಿದಿರುವುದೇ ಹೆಮ್ಮೆ ಅಂತಾರೆ.
ಕೇವಲ ಶೈಕ್ಷಣಿಕ ವಿಚಾರದಲ್ಲಿ ಮಾತ್ರವಲ್ಲದೆ ಇನ್ನಿತರ ಚಟುವಟಿಕೆಗಳಲ್ಲೂ ಡಾ.ಕೃಷ್ಣ ಹೊಂಬಾಳ್ ಪ್ರತಿಭಾವಂತರು. ಸಾಹಿತ್ಯದಲ್ಲಿ, ಕವನಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಹುಟ್ಟಿನಿಂದಲೇ ದೃಷ್ಟಿಹೀನರಾದ್ರೂ ಕಣ್ಣಿದ್ದವರಿಗೆ ಮಾರ್ಗದರ್ಶಕರಾಗಿರೋದು ಸಾಧನೆಯೇ ಸರಿ. ಇವರ ಸಾಧನೆ ಇತರರಿಗೂ ಮಾದರಿಯಾಗಲಿ..