ವಿಜಯಪುರ : ಬಸವರಾಜ ಬೊಮ್ಮಾಯಿ ಅವರ ಹೆಲಿಕಾಪ್ಟರ್ನಲ್ಲಿ ಬುಕ್ಕಿಂಗ್ ಮಹಾಸ್ವಾಮಿಗಳು ಓಡಾಡುತ್ತಿದ್ದರು ಎಂದು ವಚನಾನಂದ ಸ್ವಾಮಿಗಳ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಮಠಕ್ಕೆ ಎಷ್ಟು ಹಣ ಒಯ್ದಿದ್ದಾರೆ ಕೇಳಿ ಎಂದು ಕುಟುಕಿದ್ದಾರೆ.
10 ಕೋಟಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಬೊಮ್ಮಾಯಿ ಅವರ ಹೆಲಿಕಾಪ್ಟರ್ನಲ್ಲಿ ವಚನಾನಂದ ಶ್ರೀಗಳು ಅಡ್ಡಾಡುತ್ತಿದ್ದರು. ಬಿಜೆಪಿ ಹತ್ತಾರು ಕೋಟಿ ಕೊಟ್ಟಿದೆ. ಇಷ್ಟಾದರೂ ಅವರು ಕಾಂಗ್ರೆಸ್ಗೆ ಬುಕ್ಕಿಂಗ್ ಆಗಿದ್ದಾರೆ. ಪರಮಪೂಜ್ಯ ಬುಕ್ಕಿಂಗ್ ಮಹಾಸ್ವಾಮಿಗಳು ಅಂತ ವಚನಾನಂದ ಶ್ರೀಗಳಿಗೆ ಕರೆಯುತ್ತಾರೆ ಎಂದು ಟೀಕಿಸಿದ್ದಾರೆ.
ಸಿಎಂ ಹುದ್ದೆ ಹೋಗುವುದು ಗ್ಯಾರಂಟಿ
ಸಿದ್ದರಾಮಯ್ಯನವರಿಗೆ ಕಿವಿಮಾತು. ಡಿ.ಕೆ. ಶಿವಕುಮಾರ್ ಪರವಾದ ಅಭ್ಯರ್ಥಿ ಗಳನ್ನು ಸೋಲಿಸದಿದ್ದರೆ ನಿಮ್ಮು ಮುಖ್ಯಮಂತ್ರಿ ಹುದ್ದೆ ಹೋಗುವದು ಗ್ಯಾರಂಟಿ. ಐದು ಉಚಿತ ಗ್ಯಾರಂಟಿಗಳ ಜೊತೆಗೆ, ಸಿದ್ದರಾಮಯ್ಯ ಸಿಎಂ ಸ್ಥಾನ ಹೋಗುವುದು ಇನ್ನೊಂದು ಗ್ಯಾರಂಟಿ. ಡಿಕೆಶಿ ಬೆಂಬಲಿಗರನ್ನು ನೀವು ಸೋಲಿಸಲೇಬೇಕು. ಇಲ್ಲದಿದ್ದರೆ ನಿಮ್ಮ ಸಿಎಂ ಹುದ್ದೆ ಹೋಗುವುದು ಗ್ಯಾರಂಟಿ ಎಂದು ಶಾಸಕ ಯತ್ನಾಳ್ ಚಾಟಿ ಬೀಸಿದ್ದಾರೆ.