ಮಣಿಪುರ್ : ಕುಕಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಸಿಆರ್ಪಿಎಫ್ ಯೋಧರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ನಡೆದಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) 128 ಬೆಟಾಲಿಯನ್ಗೆ ಸೇರಿದ ಯೋಧರು ಸಾವಿಗೀಡಾಗಿದ್ದಾರೆ. ಅವರನ್ನು ಸಿಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಎನ್.ಸರ್ಕಾರ್ ಮತ್ತು ಹೆಡ್ ಕಾನ್ಸ್ಟೇಬಲ್ ಅರುಪ್ ಸೈನಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಇನ್ಸ್ಪೆಕ್ಟರ್ ಜಾದವ್ ದಾಸ್ ಮತ್ತು ಕಾನ್ಸ್ಟೇಬಲ್ ಅಫ್ತಾಬ್ ದಾಸ್ ಎಂದು ಗುರುತಿಸಲಾಗಿದೆ.
ಉಗ್ರರ ಗುಂಪು ನರನ್ಸೇನಾ ಗ್ರಾಮದ ಬೆಟ್ಟದಿಂದ ಕಣಿವೆ ಪ್ರದೇಶದ ಕಡೆಗೆ ಕೇಂದ್ರ ಭದ್ರತಾ ಪಡೆಯ ಔಟ್ಪೋಸ್ಟ್ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಈ ವೇಳೆ ಉಗ್ರರು ಔಟ್ಪೋಸ್ಟ್ ಮೇಲೆ ಬಾಂಬ್ ಎಸೆದಿದ್ದಾರೆ. ಬಾಂಬ್ ಸ್ಪೋಟಗೊಂಡ ಬಳಿಕ ಗುಂಡಿನ ಚಕಮಕಿ ತೀವ್ರಗೊಂಡಿದೆ. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಗಾಯಗೊಂಡ ಯೋಧರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ 12:30ರ ಸುಮಾರಿಗೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು 2:15ರ ದಾಳಿ ಮುಂದುವರಿಯಿತು. ದಾಳಿಕೋರರನ್ನು ಪತ್ತೆಹಚ್ಚಲು ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.