ಬೆಂಗಳೂರು : ಎಲ್ಲರೂ ಕರಗ ಸಂಭ್ರಮದಲ್ಲಿದ್ರು. ಮೆಜೆಸ್ಟಿಕ್ನ ಅಣ್ಣಮ್ಮ ದೇವಸ್ಥಾನದ ಮುಂದೆ ಕರಗ ಸಾಗುತ್ತಿತ್ತು. ಅಲ್ಲಿದ್ದವರು ಕುಣಿದು ಕುಪ್ಪಳಿಸುತ್ತಿದ್ರು. ಟಪಾಂಗುಚ್ಚಿ ಹಾಕ್ತಿದ್ದ ಟೈಮಲ್ಲೇ ಉಂಟಾದ ಕಿರಿಕ್ ಕೊಲೆಯಲ್ಲಿ ಅಂತ್ಯಯಾಗಿದೆ.
ಕೇವಲ ಮೈ ಟಚ್ ಆಗಿದ್ದಕ್ಕೆ ಯುವಕನನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ. ನಿನ್ನೆ ಬೆಂಗಳೂರು ಕರಗ ಮಹೋತ್ಸವದ ವೇಳೆ ಕ್ಷುಲ್ಲಕ ಕಾರಣಕ್ಕೆ ಶುರುವಾಗಿದ್ದ ಜಗಳದಲ್ಲಿ ಕೊಲೆಯೊಂದು ನಡೆದಿದೆ.
ನಿನ್ನೆ ರಾತ್ರಿ 3.30ರ ಸುಮಾರಿಗೆ ಮೆಜೆಸ್ಟಿಕ್ನ ಅಣ್ಣಮ್ಮ ದೇವಸ್ಥಾನದ ಬಳಿ ಕರಗ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆ ನಡೆಯುತ್ತಿದ್ದ ವೇಳೆ ಯುವಕರ ಗುಂಪು ಡ್ಯಾನ್ಸ್ ಮಾಡ್ತಿತ್ತು. ಈ ವೇಳೆ ಸಾರದಿ ಎಂಬ ಯುವಕ ಮತ್ತು ಆತನ ಸ್ನೇಹಿತರು ಡ್ಯಾನ್ಸ್ ಮಾಡ್ತಿದ್ರು. ಡ್ಯಾನ್ಸ್ ಮಾಡುವಾಗ ಅಲ್ಲಿದ್ದವನಿಗೆ ಮೈ ಟಚ್ ಆಗಿದೆ. ಈ ವೇಳೆ ಇಬ್ಬರ ಮಧ್ಯೆ ಜಗಳ ಜೋರಾಗಿದ್ದು ಸಾರದಿ ಎಂಬ ಯುವಕನಿಗೆ ಚಾಕುವಿನಿಂದ ಇರಿದಿದ್ದಾನೆ.
ಅವರೆಲ್ಲರೂ ಮಾಗಡಿ ರೋಡ್ನ ಗೋಪಾಲ ನಗರದವರು. ಒಂದೇ ಏರಿಯಾದವ್ರಾಗಿದ್ರೂ ಬರೀ ಮೈ ಟಚ್ ಆಗಿದ್ದಕ್ಕೆ ಕಿರಿಕ್ ಶುರುವಾಗಿತ್ತು. ಇಬ್ಬರ ಮಧ್ಯೆ ಜಗಳ ಜೋರಾಗ್ತಿದ್ದಂತೆಯೇ ಹೂವು ಕತ್ತರಿಸುವ (ಕಟ್ ಮಾಡುವ) ಚಾಕು ಕೈಗೆತ್ತುಕೊಂಡಿದ್ದ ಆರೋಪಿ ಸಾರದಿಗೆ ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದ. ನಂತರ ತೀವ್ರ ಗಾಯಗೊಂಡಿದ್ದ ಸಾರದಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಸಾರದಿ ಸಾವನ್ನಪ್ಪಿದ್ದಾನೆ.
ಇನ್ನು ತನಿಖೆ ವೇಳೆ ಎಲ್ಲರೂ ಅಪ್ರಾಪ್ತರು ಅಂತ ಗೊತ್ತಾಗಿದೆ. ಸದ್ಯ ಪ್ರಕರಣ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.