ಬೆಂಗಳೂರು : ಹಾಸನದಲ್ಲಿ ಲೈಂಗಿಕ ಕ್ರಿಯೆ ವಿಡಿಯೋ ಚಿತ್ರೀಕರಣ ಹಿನ್ನೆಲೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಸಂಘಟನೆಗಳಿಂದ ದೂರು ಬಂದಿವೆ. ಪೆನ್ ಡ್ರೈವ್ ಕೂಡ ಮಹಿಳಾ ಆಯೋಗಕ್ಕೆ ನೀಡಿದ್ದಾರೆ. ವಿಶೇಷ ತನಿಖಾ ತಂಡ ರಚನೆಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ಗೆ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.
ಇನ್ನು ಸಂತ್ರಸ್ತ ಮಹಿಳೆಯರು ಮಹಿಳಾ ಆಯೋಗಕ್ಕೆ ದೂರು ನೀಡಬಹುದು. ಖಾಸಗಿ ವಿಡಿಯೋ ಮಾಡಿದವರ ವಿರುದ್ಧ ತನಿಖೆ ಆಗಬೇಕು. ಸಂತ್ರಸ್ತ ಮಹಿಳೆಯರು ದೂರು ಕೊಟ್ರೆ ತನಿಖೆ ಆಗುತ್ತದೆ. ಸಂತ್ರಸ್ತರು ದೂರು ಕೊಡುವವರೆಗೆ ತನಿಖೆ ಆಗಲ್ಲ. ವಿಡಿಯೋ ವೈರಲ್ ಆಗ್ತಿರೋದು ದುರಾದೃಷ್ಟಕರ. ದೂರಿನಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಉಲ್ಲೇಖವಾಗಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತ ಹೆಣ್ಣು ಮಕ್ಕಳಿಗೆ ತೊಂದರೆ ಆಗದಂತೆ, ಸರ್ಕಾರದಿಂದ ರಕ್ಷಣೆ ನೀಡಲಾಗುತ್ತದೆ. ಎಷ್ಟು ಮಂದಿ ಸಂತ್ರಸ್ತ ಮಹಿಳೆಯರು ಎಂಬ ಬಗ್ಗೆ ಮಾಹಿತಿ ಇಲ್ಲ. ವಿಡಿಯೋದಲ್ಲಿರುವವರು ಪ್ರಜ್ವಲ್ ರೇವಣ್ಣ ಎಂಬ ಬಗ್ಗೆ ಖಾತ್ರಿ ಇಲ್ಲ. ಮಹಿಳಾ ಪರ ಸಂಘಟನೆಗಳಿಂದ ದೂರು ಬಂದಿದೆ. ಈಗಾಗಲೇ ತನಿಖಾ ತಂಡ ರಚಿಸಿವಂತೆ ಡಿಜಿ ಹಾಗೂ ಐಜಿಗೆ ಪತ್ರ ಕೂಡಾ ಬರೆಯಲಾಗಿದೆ ಎಂದು ಹೇಳಿದ್ದಾರೆ.
7 ದಿನಗಳ ಒಳಗೆ ಉತ್ತರ ನೀಡಬೇಕು
ಚಿತ್ರನಟಿ ಶೃತಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಮುಖಂಡೆ ಹಾಗೂ ಚಿತ್ರ ನಟಿಗೆ ಮಹಿಳಾ ಆಯೋಗದಿಂದ ನೊಟೀಸ್ ನಿಡಲಾಗಿದೆ. 7 ದಿನಗಳ ಒಳಗೆ ಉತ್ತರ ನೀಡಬೇಕು ಎಂದು ಶೃತಿಯವರಿಗೆ ಸೂಚಿಸಲಾಗಿದೆ. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.