ತುಮಕೂರು : ನಾನು ಭಾಗ್ಯಲಕ್ಷ್ಮಿ ಹಾಗೂ ಕಿಸಾನ್ ಸನ್ಮಾನ್ ಕೊಟ್ಟೆ. ಇದನ್ನ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಕುಟುಕಿದರು.
ತುಮಕೂರಿನ ಕೆಸ್ತೂರಿನಲ್ಲಿ ಮಾತನಾಡಿದ ಅವರು, ಅನೇಕ ಅನ್ಯಾಯ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಜನ ವೋಟು ಕೊಡೋಕೆ ಸಾಧ್ಯವಿಲ್ಲ. ಹಾಗಾಗಿ, ಸೋಮಣ್ಣ ಅವರಿಗೆ ವೋಟು ಕೊಟ್ಟು, ಸೇವೆ ಮಾಡೋದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಎಲ್ಲಾ ಸಮಾಜದವರು ಸೇರಿ ಸೋಮಣ್ಣ ಅವರನ್ನ ಗೆಲ್ತಿಸೋಕೆ ಬಂದಿದ್ದೀರಿ. ಸೋಮಣ್ಣ ಅವರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಸೋಮಣ್ಣ ಅವರು ಅಭಿವೃದ್ಧಿ ಮಾಡುವಂತವರು. ಪ್ರಧಾನಿ ಮೋದಿ ಹಾಗೂ ದೇವೇಗೌಡ್ರು ಆಶೀರ್ವಾದ ಮಾಡಿ ತುಮಕೂರು ಜಿಲ್ಲೆಯಲ್ಲಿ ನಿಲ್ಲೋಕೆ ಕಳುಹಿಸಿದ್ದಾರೆ ಎಂದು ಹೇಳಿದರು.
ತುಮಕೂರಿಗೆ ಕೈಗಾರಿಕಾ ಕಾರಿಡಾರ್
ಶಿವಕುಮಾರ ಸ್ವಾಮೀಜಿ ಅವರ ಕರ್ಮಭೂಮಿಗೆ ಬರೋದಕ್ಕೆ ಸಂತೋಷವಾಗಿದೆ. ಮೋದಿ ತಮ್ಮ ಕನಸಿನ ಕೂಸಾದ ಕೈಗಾರಿಕಾ ಕಾರಿಡಾರ್ ತುಮಕೂರಿಗೆ ನೀಡಿದ್ದಾರೆ. 7 ಸಾವಿರ ಕೋಟಿ ಹಣ ಇದಕ್ಕಾಗಿ ಬರಲಿದ್ದೂ, ಈ ಭಾಗ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.
ಅಭಿವೃದ್ಧಿ ಅಂದ್ರೆ ಸೋಮಣ್ಣ
ತಿಪಟೂರು, ಚಿಕ್ಕನಾಯಕನಹಳ್ಳಿ ಭಾಗಕ್ಕೆ ಕುಡಿಯುವ ನೀರಿನ ಯೋಜನೆ ಇದೆ. ಸೋಮಣ್ಣ ಅವರ ಮೇಲೆ ದೇವೇಗೌಡರ ಸಂಪೂರ್ಣ ಆಶೀರ್ವಾದ ಇರಲಿದೆ. ದೇವೇಗೌಡ್ರು ಮೋದಿ ನಿಕಟ ಸಂಪರ್ಕ ಹೇಗಿದೆ ನಿಮಗೆಲ್ಲಾ ಗೊತ್ತಿದೆ. ಸೋಮಣ್ಣ 2 ಲಕ್ಷ ಮತಗಳ ಅಂತರದಿಂದ ಗೆಲ್ಲೋದು ನಿಶ್ಚಿತ. ಸೋಮಣ್ಣ ಅಂದ್ರೆ ಅಭಿವೃದ್ಧಿ, ಅಭಿವೃದ್ಧಿ ಅಂದ್ರೆ ಸೋಮಣ್ಣ ಎಂದು ಯಡಿಯೂರಪ್ಪ ಹೇಳಿದರು.