ಮೈಸೂರು : ಪ್ರಧಾನಿ ನರೇಂದ್ರ ಮೋದಿ ಪರ ಹಾಡು ಬರೆದಿದ್ದಕ್ಕೆ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ರೋಹಿತ್ ಹಲ್ಲೆಗೆ ಒಳಗಾದ ಯುವಕ. ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದ ರೋಹಿತ್ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೋದಿ ಹಾಡು ಮಾಡಿದ್ದೀಯಾ? ನಿನ್ನ ಸಾಯಿಸುತ್ತೇವೆ ಎಂದು ಯುವಕರು ಬೆದರಿಕೆ ಹಾಕಿದ್ದಾರೆ. ರೋಹಿತ್ನ ಬಟ್ಟೆ ಹರಿದು ದೈಹಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವಿಡಿಯೋ ಮೂಲಕ ಘಟನೆ ಬಗ್ಗೆ ರೋಹಿತ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೋಹಿತ್, ನಾನು ಕಳೆದ ವಾರ ಪ್ರಧಾನಿ ಮೋದಿ ಕುರಿತು ಒಂದು ಹಾಡು ಮಾಡಿದ್ದೆ. ಜನರಿಗೆ ಈ ಹಾಡು ತೋರಿಸಿ, ಚಾನೆಲ್ ಸಬ್ಸ್ಕ್ರೈಬ್ ಮಾಡುವಂತೆ ಕೇಳಿಕೊಳ್ಳುತ್ತಿದ್ದೆ. ನಾನು ಸರ್ಕಾರಿ ಗೆಸ್ಟ್ ಹೌಸ್ ಬಳಿ ಕೂತಿದ್ದೆ. ಆಗ ಒಬ್ಬ ಹುಡುಗ ಬಂದಿದ್ದ. ಆತನಿಗೆ ಈ ಹಾಡು ತೋರಿಸಿದಾಗ ಆತ ಹಾಡು ಚೆನ್ನಾಗಿದೆ ಎಂದ. ಬಳಿಕ ಬನ್ನಿ ನಾನು ನನ್ನ ಸ್ನೇಹಿತರಿಗೂ ತೋರಿಸುತ್ತೇನೆ ಎಂದು ನನ್ನನ್ನು ಆತನ ಸ್ನೇಹಿತರ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ ಎಂದು ಹೇಳಿದ್ದಾರೆ.
ಅಲ್ಲಾ ಹು ಅಕ್ಬರ್ ಘೋಷಣೆ ಕೂಗುವಂತೆ ಧಮ್ಕಿ
ಈ ವೇಳೆ ಯುವಕರ ಗುಂಪು ಮೋದಿ ಬಗ್ಗೆ ಹಾಡು ಮಾಡ್ತೀಯಾ? ಎಂದು ಪ್ರಶ್ನಿಸಿದರು. ಪಾಕಿಸ್ತಾನ ಪರ ಘೋಷಣೆ ಕೂಗು. ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗುವಂತೆ ಧಮ್ಕಿ ಹಾಕಿದರು. ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನನಗೆ ಅವರು ಅನ್ಯಕೋಮಿನ ಯುವಕರು ಅಂತ ಗೊತ್ತಿರಲಿಲ್ಲ ಎಂದು ರೋಹಿತ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.