ಶಿವಮೊಗ್ಗ : ಯಡಿಯೂರಪ್ಪ ಮತ್ತು ಅವರ ಮಕ್ಕಳಿಂದ ಬಿಜೆಪಿ ಪಕ್ಷ ಹಾಗೂ ಹಿಂದುತ್ವವನ್ನು ಉಳಿಸುವುದಕ್ಕಾಗಿ ನಾನು ಬಲಿದಾನಕ್ಕೂ ಸಿದ್ಧ ಎಂದು ಶಿವಮೊಗ್ಗ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸತ್ಯ ಹೇಳಿದರೆ ಈ ಅಪ್ಪ ಮಕ್ಕಳಿಗೆ ಸಿಟ್ಟು ಬರುತ್ತದೆ ಎಂದು ಕುಟುಕಿದ್ದಾರೆ.
ಶಿಕಾರಿಪುರ, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಇವರು ಒಳ ಒಪ್ಪಂದ ಮಾಡಿಕೊಂಡಿರಲಿಲ್ಲ ಎಂದು ಹೇಳಲಿ. ಈ ಹಿಂದಿನ ವಿಧಾನಸಭಾ ಕ್ಷೇತ್ರದಲ್ಲಿ ಶಿಕಾರಿಪುರದಲ್ಲಿ ಕಾಂಗ್ರೆಸ್ನೊಂದಿಗೆ ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡು ಇಬ್ಬರನ್ನು ಪಕ್ಕಕ್ಕೆ ಸರಿಸಿದ್ದು ಗೊತ್ತಿಲ್ಲದ ವಿಷಯವೇ? ಹಾಗೆಯೇ ಭದ್ರಾವತಿಯಲ್ಲಿ ಸಂಗಮೇಶ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು ಸುಳ್ಳೇ? ಎಂದು ಪ್ರಶ್ನೆ ಮಾಡಿದ್ದಾರೆ.
ಗೀತಾ ಶಿವರಾಜ್ಕುಮಾರ್ ಡಮ್ಮಿ ಅಭ್ಯರ್ಥಿ
ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲೂ ಬಿ.ಎಸ್. ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಗೀತಾ ಶಿವರಾಜ್ಕುಮಾರ್ ಅವರೇ ಚುನಾವಣೆಗೆ ನಿಲ್ಲುವಂತೆ ಮಾಡಿದ್ದಾರೆ. ಅವರು ಡಮ್ಮಿ ಅಭ್ಯರ್ಥಿ. ಅಧಿಕಾರಕ್ಕಾಗಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವ ಯಡಿಯೂರಪ್ಪ ಕುಟುಂಬ ಅದಕ್ಕಾಗಿಯೇ ಹಿಂದುತ್ವವನ್ನು ಪಕ್ಕಕ್ಕೆ ಸರಿಸಿದರು ಎಂದು ಆರೋಪ ಮಾಡಿದ್ದಾರೆ.
ಕಾಂಗ್ರೆಸ್ನವರು ನನಗೆ ಬೆಂಬಲ ನೀಡುತ್ತಿದ್ದಾರೆ
ಗೀತಾ ಶಿವರಾಜ್ಕುಮಾರ್ ಡಮ್ಮಿ ಎಂದು ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ. ಕಾಂಗ್ರೆಸ್ನ ಅನೇಕರು ನನಗೆ ಬೆಂಬಲ ನೀಡುತ್ತಿದ್ದಾರೆ. ಅವರ ಹೆಸರುಗಳನ್ನು ನಾನು ಈಗ ಹೇಳುವುದಿಲ್ಲ. ಆದರೆ, ಇದು ನಿಜ. ಕಾಂಗ್ರೆಸ್, ಜೆಡಿಎಸ್, ಹಿಂದುತ್ವ ಹೀಗೆ ಎಲ್ಲಾ ಮತಗಳು ಸೇರಿ ನಾನು ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.